ಶಿವಮೊಗ್ಗ ಲೈವ್.ಕಾಂ | 14 ಮೇ 2019
ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೈ ತಪ್ಪಿದ ಹಿನ್ನೆಲೆ, ಬಿಜೆಪಿ ಯುವ ಮೊರ್ಚಾ ಕಾರ್ಯಕರ್ತನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದ ಮುಂದೆ ನಿಂತು ಅಳಲು ತೋಡಿಕೊಂಡಿದ್ದಾರೆ. ಆ ವಿಡಿಯೊ ಈಗ ಫುಲ್ ವೈರಲ್ ಆಗಿದ್ದು, ಸಾಗರ ಬಿಜೆಪಿಯೊಳಗೆ ಚರ್ಚೆಗೆ ಕಾರಣವಾಗಿದೆ.
ಗಣೇಶ್ ಗಟ್ಟಿ, ಅಳಲು ತೋಡಿಕೊಂಡ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ. ಜಾತಿ ಬಲವಿಲ್ಲ, ಹಣ ಬಲವಿಲ್ಲ ಎಂಬ ಕಾರಣಕ್ಕೆ ತಮಗೆ ಟಿಕೆಟ್ ತಪ್ಪಿಸಲಾಗಿದೆ ಅಂತಾ ಗಣೇಶ್ ಗಟ್ಟಿ ಆರೋಪಿಸಿದ್ದಾರೆ. ಸಾಗರ ನಗರಸಭೆಯ 18ನೇ ವಾರ್ಡ್’ನ ಟಿಕೆಟ್ ಆಕಾಂಕ್ಷಿಯಾಗಿದ್ದರು ಗಣೇಶ್. ಆದರೆ ಪಕ್ಷ ಬೇರೊಬ್ಬರಿಗೆ ಟಿಕೆಟ್ ನೀಡಿದ್ದರಿಂದ, ಗಣೇಶ್ ಗಟ್ಟಿ ಗರಂ ಆಗಿದ್ದಾರೆ. ಸಾಗರ ಬಿಜೆಪಿ ಕಚೇರಿ ಮುಂದಿರುವ ಪ್ರಧಾನಿ ಮೋದಿ, ಅಮಿತ್ ಷಾ, ಯಡಿಯೂರಪ್ಪ ಅವರ ಭಾವಚಿತ್ರದ ಮುಂದೆ ನಿಂತು ಅಳಲು ತೋಡಿಕೊಂಡಿದ್ದಾರೆ.
ಆಟೋ ಚಾಲಕನಾಗಿರುವ ಗಣೇಶ್ ಗಟ್ಟಿ, ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಯುವ ಮೊರ್ಚಾದ ಕಾರ್ಯಕರ್ತನಾಗಿರುವ ಹಿನ್ನಲೆಯಲ್ಲಿ, ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಸಾಗರ ನಗರಸಭೆ ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]