ಶಿವಮೊಗ್ಗ ಲೈವ್.ಕಾಂ | SHIMOGA NEWS | 17 MAY 2021
ನಾಲ್ಕು ದಿನದ ಕಠಿಣ ಲಾಕ್ ಡೌನ್ ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರದಲ್ಲಿ ಜನ ಮತ್ತು ವಾಹನ ಸಂಚಾರ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಜನ ದೊಡ್ಡ ಸಂಖ್ಯೆಯಲ್ಲಿ ಮನೆಯಿಂದ ಹೊರ ಬಂದಿದ್ದಾರೆ.
ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿತ್ತು. ಹಾಗಾಗಿ ಜನ ಸಂಚಾರ ಹೆಚ್ಚಳವಾಗಿದೆ.
ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸಂಚಾರವಿದೆ. ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ವ್ಯಾಪಾರ ಬಿರುಸಾಗಿದೆ. ಜೈಲ್ ಸರ್ಕಲ್ನಿಂದ ನೆಹರೂ ರಸ್ತೆಗೆ ಸಂಪರ್ಕ ಕಲ್ಪಿಸುವ ಕುವೆಂಪು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ನೆಹರೂ ರೋಡ್ನಲ್ಲಿ ಅಂಗಡಿಗಳು ಬಂದ್ ಆಗಿವೆ. ಗಾಂಧಿ ಬಜಾರ್ನಲ್ಲೂ ಅಗತ್ಯ ವಸ್ತುಗಳ ಖರೀದಿಗೆ ಜನರು ಆಗಮಿಸಿದ್ದರು. ವಿನೋಬನಗರ, ಪೊಲೀಸ್ ಚೌಕಿಯಲ್ಲೂ ಜನ ದಟ್ಟಣೆ ಹೆಚ್ಚಿತ್ತು. ಗೋಪಾಳ ಬಡಾವಣೆಯಲ್ಲಿ ಸಾಮಾನ್ಯ ದಿನದ ಹಾಗೆ ಜನ ಸಂಚಾರವಿತ್ತು. ಮುಖ್ಯ ರಸ್ತೆಯ ಶಾಪಿಂಗ್ ಮಾಲ್ನಲ್ಲಿ ಖರೀದಿಗೆ ಜನ ಸೇರಿದ್ದರು.
ಇತ್ತ ವಿದ್ಯಾನಗರ, ಹೊಳೆ ಬಸ್ ಸ್ಟಾಪ್ನಲ್ಲೂ ವಾಹನ ಮತ್ತು ಜನ ದಟ್ಟಣೆ ಇತ್ತು. ಅಗತ್ಯ ವಸ್ತುಗಳ ಖರೀದಿ, ತುರ್ತು ಸೇವೆಗಳಿಗೆ ತೆರಳುವವರು ಮತ್ತು ಸರ್ಕಾರ ನಿರ್ಬಂಧದಿಂದ ವಿನಾಯಿತಿ ಪಡೆದಿರುವ ಸೇವೆ ಮತ್ತು ಕಚೇರಿಗಳಿಗೆ ತೆರಳುವವರು ರಸ್ತೆಗಿಳಿದಿದ್ದರು.
ನಾಲ್ಕು ದಿನದ ಬಳಿಕ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲಾಯಿತು. ಆದರೆ ಹೋಲ್ ಸೇಲ್ಗೆ ಮಾತ್ರ ಅವಕಾಶ ನೀಡಲಾಗಿದೆ.
ಇನ್ನು, ಲಾಕ್ ಡೌನ್ ವಿನಾಯಿತಿ ಅವಧಿ ಮುಗಿಯುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಮುಖ ರಸ್ತೆ, ಸರ್ಕಲ್ಗಳಲ್ಲಿ ತಪಾಸಣೆ ಶುರು ಮಾಡಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]