ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟೆಂಬರ್ 2020
ರೈತ, ಕಾರ್ಮಿಕ, ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆ ಶಿವಮೊಗ್ಗದಲ್ಲೂ ಬಂದ್ ಮಾಡಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಸೆಪ್ಟೆಂಬರ್ 28ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗುತ್ತದೆ. ವರ್ತಕರು, ಆಟೋ ಚಾಲಕರು, ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಿಗಳು, ಉದ್ಯೋಗ ಕಳೆದುಕೊಂಡವರು ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಮೋಟರ್ ಸೈಕಲ್ ಜಾಥಾ
ಬಂದ್ ದಿನ ನಾವು, ನಮ್ಮ ಕಾರ್ಯಕರ್ತರು ಮೋಟರ್ ಸೈಕಲ್ ಜಾಥಾ ಮಾಡುತ್ತೇವೆ. ಒಂದು ದಿನ ಬಂದ್ ಮಾಡುವಂತೆ ಮನವಿ ಮಾಡುತ್ತೇವೆ.
ಬಸ್ ನಿಲ್ದಾಣದಿಂದ ಜಾಥಾ
ಆ ದಿನ ಬೆಳಗ್ಗೆ 10 ಗಂಟೆಗೆ ಬಸ್ ನಿಲ್ದಾಣದಿಂದ ಬೃಹತ್ ಜಾಥಾ ನಡೆಯಲಿದೆ. ವಿವಿಧ ಸಂಘಟನೆಗಳ ಮುಖಂಡರು ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿವರಗೆ ಮೆರವಣಿಗೆ ನಡೆಯಲಿದೆ ಎಂದು ಬಸವರಾಜಪ್ಪ ತಿಳಿಸಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಭೂ ಸುಧಾರಣೆ ಕಯ್ದೆಗಾಗಿ ಈ ನೆಲದಲ್ಲಿ ಹೋರಾಟ ಮಾಡಲಾಗಿತ್ತು. ಇವತ್ತು ಇವರು ತಂದಿರುವುದು ತಿದ್ದುಪಡಿ ಅಲ್ಲ. ಕಾಯ್ದೆಯ ಸಂಪೂರ್ಣ ಬದಲಾವಣೆ. ಇದು ಹೆಚ್ಚು ಅಪಾಯಕಾರಿಯಾಗಿದೆ. ಹಾಗಾಗಿ ಎಲ್ಲರು ಒಗ್ಗೂಡಿ ಬಂದ್ ಮಾಡಬೇಕಿದೆ ಎಂದರು.
ಪ್ರಗತಿಪರ ಸಂಘಟನೆಗಳ ಮುಖಂಡ ಕೆ.ಎಲ್.ಅಶೋಕ್ ಮಾತನಾಡಿ, ಬಹುಮತವಿದೆ ಎಂಬ ಕಾರಣಕ್ಕೆ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತಂದಿದ್ದಾರೆ. ಇದಕ್ಕೆ ಎಲ್ಲರು ವಿರೋಧ ಮಾಡಬೇಕಿದೆ ಎಂದರು.
ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಈ ಶಾಸನಗಳ ಕುರಿತು ಚರ್ಚೆಗೆ ಬನ್ನಿ ಅಂದರೆ ಯಾರೊಬ್ಬರು ಮುಂದೆ ಬರುತ್ತಿಲ್ಲ. ನಾನು ಹೇಳಿದರೆ ದೇಶ ಕೇಳುತ್ತೆ ಅನ್ನುವ ಹುಚ್ಚು ಭ್ರಮೆಯಲ್ಲಿದ್ದರು ಪ್ರಧಾನಿ ನರೇಂದ್ರ ಮೋದಿ. ಈಗ ದೇಶ ಒಪ್ಪುತ್ತಿಲ್ಲ. ಅಲ್ಲದೆ ಶಾಸನಗಳ ಬಗ್ಗೆ ಚರ್ಚೆಗೂ ಬರುತ್ತಿಲ್ಲ. ಇವರು ತಂದಿರುವ ಶಾಸನಗಳನ್ನು ಸಮರ್ಥಿಸಿಕೊಳ್ಳಲು ಹೊರಟರೆ ಜನ ಬಡಿಗೆ ತೆಗೆದುಕೊಳ್ಳುತ್ತಾರೆ. ದೇಶಾದ್ಯಂತ ನಡಿತಿರುವ ಚಳವಳಿಗಳೆ ಇದಕ್ಕೆ ಸಾಕ್ಷಿ. ಸರ್ವಾಧಿಕಾರಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಂದ್ ಮಾಡಬೇಕಿದೆ.
ದಲಿತ ಸಂಘಟನೆ ಮುಖಂಡ ಹಾಲೇಶಪ್ಪ ಮಾತನಾಡಿ, ರೈತರಿಗೆ ಆಪತ್ತು ಬಂದರೆ ಎಲ್ಲ ವರ್ಗದ ಜನರು ಸಂಕಷ್ಟ ಅನುಭವಿಸಬೇಕು. ಹಾಗಾಗಿ ಎಲ್ಲರೂ ಸಹಕಾರ ನೀಡಿ, ಬಂದ್ ಮಾಡಬೇಕಿದೆ.
ಸ್ವರಾಜ್ ಪಕ್ಷದ ಅಧ್ಯಕ್ಷ ಕೆ.ಪಿ.ಶ್ರೀಪಾಲ್ ಮಾತನಾಡಿ, ಅಂಗಡಿ, ಹೊಟೇಲ್ ಸೇರಿದಂತೆ ಎಲ್ಲರ ಸಹಕಾರ ನೀಡಬೇಕು. ಆಡಳಿತ ಪಕ್ಷ ಹೊರತು ಎಲ್ಲರೂ ಬೆಂಬಲ ಘೋಷಿಸಿದ್ದಾರೆ ಎಂದರು.