SHIVAMOGGA LIVE | 29 JUNE 2023
SAGARA : ಮಳೆ ಕೊರತೆಯಿಂದಾಗಿ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಇನ್ನು ಮೂರ್ನಾಲ್ಕು ದಿನದಲ್ಲಿ ಲಾಂಚ್ (launch) ಸೇವೆ ಸ್ಥಗಿತಗೊಳ್ಳಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಡವು ನಿರೀಕ್ಷಕರ ಜೊತೆ ಸಭೆ ನಡಸಿದ್ದೇನೆ. ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಲಾಂಚ್ (launch) ಸಂಚಾರ ಕಷ್ಟವಾಗಲಿದೆ. ಈ ಹಿನ್ನೆಲೆ ಮೂರ್ನಾಲ್ಕು ದಿನದಲ್ಲಿ ಲಾಂಚ್ ಸೇವೆ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಇದೆ. ಶರಾವತಿ ಕಣಿವೆಯ 20 ಸಾವಿರ ಜನರು ಇರುವ ಪ್ರದೇಶಕ್ಕೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.
ಪರ್ಯಾಯ ವ್ಯವಸ್ಥೆಯ ಚಿಂತನೆ
ಲಾಂಚ್ ಸ್ಥಗಿತಗೊಂಡರೆ ಸಿಗಂದೂರು ಸೇರಿದಂತೆ ಸುತ್ತಮುತ್ತಲ ಊರುಗಳಿಗೆ 80 ಕಿ.ಮೀ ಸುತ್ತಿಕೊಂಡು ಹೋಗಬೇಕು. ಇದಕ್ಕಾಗಿ ಬಸ್ಸಿನ ವ್ಯವಸ್ಥೆ ಮತ್ತು ಇತರೆ ಮೂಲ ಸೌಕರ್ಯ ಒದಗಿಸಲು ಚಿಂತನೆ ನಡೆದಿದೆ. ಇನ್ನು, ಶರಾವತಿ ವಿದ್ಯುದಾಗಾರದಲ್ಲಿ 12 ದಿನ ವಿದ್ಯುತ್ ಉತ್ಪಾದನೆಗೆ ನೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ – ಸಿಗಂದೂರು ಲಾಂಚ್, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ಸಮಸ್ಯೆ ನಿಶ್ಚಿತ, ವಾಹನಗಳಿಗೆ ಇಲ್ಲಿದೆ ಪರ್ಯಾಯ ಮಾರ್ಗ
ಎಲ್ಲರು ಮಳೆಗಾಗಿ ದೇವರನ್ನು ಪ್ರಾರ್ಥಿಸಬೇಕಿದೆ. ಮಳೆಯ ವಾತಾವರಣವಿದೆ. ಉತ್ತಮವಾಗಿ ಮಳೆಯಾದರೆ ಸಮಸ್ಯೆ ಪರಿಹಾರವಾಗಲಿದೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಲಾಂಚ್ನಲ್ಲಿ ಜನರಿಗಷ್ಟೆ ಅವಕಾಶ
ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆ ಈಗಾಗಲೆ ಲಾಂಚ್ನಲ್ಲಿ ವಾಹನಗಳನ್ನು ಕೊಂಡೊಯ್ಯುವುದನ್ನು ನಿರ್ಬಂಧಿಲಸಾಗಿದೆ. ಜೂನ್ 14 ರಿಂದ ಈ ನಿರ್ಬಂಧ ಜಾರಿಗೆ ಬಂದಿದೆ. ನೀರಿನ ಮಟ್ಟ ಇನ್ನಷ್ಟು ತಗ್ಗಿರುವುದರಿಂದ ಈಗ ಲಾಂಚ್ ಸೇವೆ ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ಇದರಿಂದ ತುಮರಿ, ಬ್ಯಾಕೋಡು ಭಾಗದ ಸಾವಿರಾರು ನಿವಾಸಿಗಳು ಮತ್ತು ಸಿಗಂದೂರು ಪ್ರವಾಸಿಗರಿಗೆ ಸಮಸ್ಯೆಯಾಗಲಿದೆ.