SHIVAMOGGA LIVE NEWS | 14 JANUARY 2024
SIGANDURU : ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಮೂಲ ಸನ್ನಿಧಿ ಸೀಗೆಕಣಿವೆಯಲ್ಲಿ ಪೂಜೆ ಸಲ್ಲಿಸಲಾಯಿತು. ಆ ಬಳಿಕ ಸಿಗಂದೂರು ಜಾತ್ರೆಗೆ ಚಾಲನೆ ದೊರೆಯಿತು. ಸಿಗಂದೂರು ಚೌಡಮ್ಮ ದೇವಿಯ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವದ ಧರ್ಮಜ್ಯೋತಿಗೆ ಕೇರಳದ ಶಿವಗಿರಿಯ ನಾರಾಯಣ ಗುರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ತಿಮ್ಮೆ ಗೌಡ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಧರ್ಮಜ್ಯೋತಿಗೆ ಮೆರವಣಿಗೆ ಸಂದರ್ಭ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಹೋಳಿ ಕುಣಿತ, ಹುಲಿ ಕುಣಿತ, ದೇವರ ಕುಣಿತ, ಕೋಲಾಟ ಸೇರಿದಂತೆ ವಿವಿಧ ಕಲಾ ತಂಡಗಳು ಜಾನಪದ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ತುಮರಿ ಹೋಬಳಿಯ ಮಹಿಳೆಯರು ಜ್ಯೋತಿಗೆ ಪೂರ್ಣ ಕುಂಭ ಸ್ವಾಗತ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಸಿಗಂದೂರು ಮಹಾತ್ಮೆ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?
ಶ್ರೀ ಸಚ್ಚಿದಾನಂದ ಸ್ವಾಮೀಜಿ, ಕೇರಳದ ಶಿವಗಿರಿಯ ನಾರಾಯಣ ಗುರು ಮಠದ ಪೀಠಾಧಿಪತಿ : ವನದೇವತೆ ಸಿಗಂದೂರು ಚೌಡೇಶ್ವರಿ ನಾಡ ದೇವತೆಯಾಗಿರುವುದು ದೇವಿಯ ಮಹಿಮೆ ಅಪಾರ. ಧರ್ಮದ ಅಧ:ಪತನದ ಸಂದರ್ಭ ಮಹಾಪುರುಷರು ಹುಟ್ಟಿ, ಧರ್ಮದ ರಕ್ಷಣೆ ಮಾಡುತ್ತಾರೆ. ಆದರೆ ಸಿಗಂದೂರು ದೇವಿಯು ಧರ್ಮರಕ್ಷಣೆ ಮಾಡುವ ಧರ್ಮರಕ್ಷಕಿಯಾಗಿ ಭಕ್ತರನ್ನು ಪೊರೆಯಲಿ. ಹಿಂದುಳಿದ ವರ್ಗದ ಪಾಲಿಗೆ ಆರಾಧ್ಯ ದೈವವಾದ ಕೇರಳದ ಶಿವಗಿರಿಯ ಸಂತ ನಾರಾಯಣ ಗುರುಗಳು ಜಗತ್ತಿಗೆ ಮಾದರಿಯಾದರು. ಬುದ್ಧ, ಬಸವ, ಗಾಂಧಿ, ನಾರಾಯಣ ಗುರುವಿನ ತತ್ವಗಳು ಇಂದಿಗೂ ಮನುಕುಲಕ್ಕೆ ಮಾದರಿ ಎಂದರು.
ಡಾ. ತಿಮ್ಮೇಗೌಡ, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ : ಈಡಿಗ ಸಮಾಜದ ದೇವಾಲಯಗಲ್ಲಿ ಒಂದಾಗಿರುವ ಚೌಡೇಶ್ವರಿ ದೇವಾಲಯದ ಅಭಿವೃದ್ಧಿಯ ಜೊತೆಗೆ ಈ ಕ್ಷೇತ್ರವನ್ನು ಕಾಪಾಡಬೇಕಾದ ಗುರುತರ ಜವಾಬ್ದಾರಿ ಸಮಾಜದ ಮೇಲಿದೆ.
ಮಧು ಬಂಗಾರಪ್ಪ, ಶಿಕ್ಷಣ ಸಚಿವ : ಶ್ರೀ ಕ್ಷೇತ್ರದ ರಕ್ಷಣೆ ನಮ್ಮ ಸರಕಾರದ ಹೊಣೆ. ಸಿಗಂದೂರು ದೇವಿಯ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ.
ಬೇಳೂರು ಗೋಪಾಲಕೃಷ್ಣ, ಶಾಸಕ : ಸಿಗಂದೂರು ಕ್ಷೇತ್ರವು ಸರ್ವಧರ್ಮದ ಸಂಗಮ ಸ್ಥಳ. ಶ್ರೀ ಕ್ಷೇತ್ರವು ಜಗತ್ತಿನ ಭಕ್ತಿ ಭಾವದ ಕೇಂದ್ರವಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆ.
ಕೇರಳ ವರ್ಕಲ್ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ, ಡಾ. ನಾಗಭೂಷಣ್ ಶಿವಾಚಾರ್ಯ ಸ್ವಾಮೀಜಿ, ಸಿಗಂದೂರು ಶ್ರೀ ಚೌಡೇಶ್ವರಿ ದೇಗುಲದ ಅನುವಂಶೀಯ ಧರ್ಮದರ್ಶಿ ಡಾ. ರಾಮಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಎಂ.ಶ್ರೀಕಾಂತ್, ಸೂರಜ್ ನಾಯ್ಕ್, ಎಸ್.ಎನ್.ಡಿ.ಪಿಯ ಸೈದಾಪುರ ಗುತ್ತಿಗೆದಾರ್, ತುಮರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ , ರವಿಕುಮಾರ್.ಹೆಚ್.ಆರ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ತುಂಗೆಯಲ್ಲಿ ವೈಭವದ ತೆಪ್ಪೋತ್ಸವ, ಕಣ್ಮನ ಸೆಳೆಯಿತು ಸಿಡಿಮದ್ದು ಪ್ರದರ್ಶನ – ಇಲ್ಲಿದೆ ಫೋಟೊ ಮಾಹಿತಿ
ಜಾತ್ರೆ ಅಂಗವಾಗಿ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿದ್ದರು. ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.