ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2020
ಶಿವಮೊಗ್ಗದಲ್ಲಿ ಕರೋನಾ ಸೋಂಕಿನಿಂದ ಸ್ವಾಮೀಜಿಯೊಬ್ಬರು ಲಿಂಗೈಕ್ಯರಾಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ ಅವರು ಚಿಕಿತ್ಸೆಗೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರದ ಹಾಲಸ್ವಾಮಿ ಮಠದ ಶ್ರೀ ಹಾಲಶಂಕರ ವಿಶ್ವಾರಾಧ್ಯ ಸ್ವಾಮೀಜಿ (55) ಅವರು ಮೃತಪಟ್ಟಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್ ಪಾಸಿಟಿವ್
ಜುಲೈ 9ರಂದು ಮದ್ಯಾಹ್ನ ಸ್ವಾಮೀಜಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ, ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಜುಲೈ 11ರಂದು ಸ್ವಾಮೀಜಿ ಅವರಿಗೆ ಕರೋನ ಸೋಂಕು ಇರುವುದು ದೃಢವಾಗಿತ್ತು.
ಸ್ವಾಮೀಜಿಗೆ ವೆಂಟಿಲೇಟರ್
ಕೋವಿಡ್ ವಾರ್ಡ್ನಲ್ಲಿ ಸ್ವಾಮೀಜಿ ಅವರಿಗೆ ಚಿಕಿತ್ಸೆ ಮುಂದುವರೆದಿತ್ತು. ಆದರೆ ಇವತ್ತು ಸ್ವಾಮೀಜಿ ಅವರ ಆರೋಗ್ಯ ಬಿಗಡಾಯಿಸಿತು. ಕೂಡಲೆ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ, ವೆಂಟಿಲೇಷನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಂಜೆ 4.55ರ ಹೊತ್ತಿಗೆ ಸ್ವಾಮೀಜಿ ಅವರು ಲಿಂಗೈಕ್ಯರಾದರು.
ಮುಳ್ಳುಗದ್ದುಗೆ ಸ್ವಾಮೀಜಿ ಎಂದೇ ಪ್ರಖ್ಯಾತಿ
ಮುಳ್ಳುಗದ್ದುಗೆ ಸ್ವಾಮೀಜಿ ಎಂದೆ ಇವರು ಪ್ರಖ್ಯಾತರಾಗಿದ್ದರು. ಸ್ವಾಮೀಜಿ ಅವರಿಗೆ ಉಸಿರಾಟದ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಭಕ್ತರೆ ಅವರನ್ನು ಆಸ್ಪತ್ರೆಗೆ ಕರೆತಂದಿದ್ದರು. ಹೊನ್ನಾಳಿ ತಾಲೂಕು ರಾಂಪುರ ಮಠ ಮತ್ತು ಚನ್ನಗಿರಿ ತಾಲೂಕು ಬಸವಾಪಟ್ಟಣದ ಗವಿಮಠದ ಪೀಠಾಧ್ಯಕ್ಷರಾಗಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]