SHIVAMOGGA LIVE NEWS | 18 OCTOBER 2023
SHIMOGA : ಕಳೆದ ವರ್ಷ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಕ್ರೆಬೈಲಿನ ಭಾನುಮತಿ ಆನೆಯ (Elephant) ಬಾಲಕ್ಕೆ ಹರಿತವಾದ ಆಯುಧದಿಂದ ಹೊಡೆದು ಗಾಯಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.
ಭಾನುಮತಿ ಆನೆ (Elephant) ತುಂಬು ಗರ್ಭಿಣಿಯಾಗಿದ್ದು ಪ್ರಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಭಾನುಮತಿ ಆನೆಯ ಬಾಲಕ್ಕೆ ಚೂಪಾದ ಆಯುಧದಿಂದ ಹೊಡೆಯಲಾಗಿದೆ. ಬಾಲಕ್ಕೆ ಗಂಭೀರ ಗಾಯವಾಗಿದೆ. ಸಕ್ರೆಬೈಲು ಬಿಡಾರದ ವೈದ್ಯರು ಭಾನುಮತಿಗೆ ಚಿಕಿತ್ಸೆ ನೀಡಿದ್ದಾರೆ.
ಇದನ್ನೂ ಓದಿ- ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ 8 ಅಡಿ ಉದ್ದದ ಹೆಬ್ಬಾವು ಸೆರೆ
ಘಟನೆಗೆ ಕಾರಣವೇನು?
ಭಾನುಮತಿ ಆನೆಯ ಮಾವುತ ಮತ್ತು ಕಾವಾಡಿ ಮೇಲಿನ ದ್ವೇಷಕ್ಕೆ ಬಿಡಾರದ ಒಳಗಿರುವವರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟಗಾರ್, ಭಾನುಮತಿ ಆನೆಯನ್ನು ಎಂದಿನಂತೆ ಕಾಡಿಗೆ ಬಿಡಲಾಗಿತ್ತು. ಕರೆತರಲು ಮಾವುತರು ಹೋದಾಗ ರಕ್ತದ ಕಲೆ ಕಾಣಿಸಿತ್ತು. ಪರಿಶೀಲಿಸಿದಾಗ ಬಾಲಕ್ಕೆ ಗಾಯವಾಗಿತ್ತು. ಹರಿತವಾದ ವಸ್ತುವಿನಿಂದ ಗಾಯಗೊಳಿಸಿದಂತೆ ಕಂಡು ಬರುತ್ತಿದೆ. ಆನೆ ಆರೋಗ್ಯವಾಗಿದೆ. ಬಾಲ ಅಲ್ಲಾಡಿಸುತ್ತಿದೆ. ಘಟನೆ ಸಂಬಂಧ ತನಿಖೆಗೆ ನಡೆಸುವಂತೆ ಆರ್.ಎಫ್.ಓ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾನುಮತಿ ಆನೆ ಪಾಲ್ಗೊಂಡಿತ್ತು. ಕಳೆದ ವರ್ಷವು ಭಾನುಮತಿ ಆನೆ ಮೆರವಣಿಗೆಯಲ್ಲಿತ್ತು. ಈ ಬಾರಿ ಗರ್ಭಿಣಿ ಆಗಿರುವುದರಿಂದ ಭಾನುಮತಿ ಆನೆ ದಸರಾದಲ್ಲಿ ಭಾಗವಹಿಸುತ್ತಿಲ್ಲ.