ಹೊಳೆಹೊನ್ನೂರು: ಭದ್ರಾಪುರ ಗ್ರಾಮದಲ್ಲಿ ನಡೆದಿದ್ದ ಮೋಟರ್ ಕೇಬಲ್ ವೈರ್ ಕಳ್ಳತನ ಪ್ರಕರಣವನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು ₹1.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಭದ್ರಾಪುರ ಗ್ರಾಮದ ವಾಗೀಶ ಅವರು ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 25ರಂದು ಸುಮಾರು ₹1.10 ಲಕ್ಷ ರೂ. ಮೌಲ್ಯದ ಕೇಬಲ್ ವೈರ್ ಕಳ್ಳತನವಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಜುಲೈ 31ರಂದು ದಾಳಿ ನಡೆಸಿದ ಪೊಲೀಸರು, ಶಿವಮೊಗ್ಗದ ವಿದ್ಯಾನಗರದ ತೇಜಸ್.ಎಸ್ ಅಲಿಯಾಸ್ ತೇಜು (21) ಹಾಗೂ ಭದ್ರಾವತಿ ತಾಲ್ಲೂಕು ಮಲ್ಲಿಗೆನಹಳ್ಳಿ ಗ್ರಾಮದ ಅನಿಲ್.ಎಲ್ ಅಲಿಯಾಸ್ ರೊಡ್ಡ (24) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹1.10 ಲಕ್ಷ ಮೌಲ್ಯದ 110 ಮೀಟರ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಠಾಣೆ ಇನ್ಸ್ಪೆಕ್ಟರ್ ಶಿವಪ್ರಸಾದ್ ಎಂ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್ಐ ಶಾಂತಲಾ, ಸಿಬ್ಬಂದಿ ಅಣ್ಣಪ್ಪ, ಪ್ರಸನ್ನ, ಪ್ರಕಾಶ್ ನಾಯ್ಕ್, ಮಂಜುನಾಥ, ಜಿಲ್ಲಾ ತಾಂತ್ರಿಕ ಸಿಬ್ಬಂದಿ ಗುರುರಾಜ ಮತ್ತು ಇಂದ್ರೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.