ಶಿವಮೊಗ್ಗ: ಹೊಸನಗರ ಭಾಗದಲ್ಲಿ ಕಾಂತಾರಾ 1 ಸಿನಿಮಾ (Movie) ಚಿತ್ರೀಕರಣದ ವೇಳೆ ಅವಘಡ ಸಂಭವಿಸಿ ಚಿತ್ರತಂಡದವರು ಗಾಯಗೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಮಧ್ಯೆ ಜಿಲ್ಲಾಡಳಿತ ಚಿತ್ರತಂಡಕ್ಕೆ ನೊಟೀಸ್ ನೀಡುವುದಾಗಿ ತಿಳಿಸಿತ್ತು. ಇದರ ಬೆನ್ನಿಗೆ ಚಿತ್ರತಂಡ ಘಟನೆ ಕುರಿತು ಸ್ಪಷ್ಟನೆ ನೀಡಿದೆ.
ಹೊಸನಗರ ತಾಲೂಕು ನಗರ ಹೋಬಳಿಯ ಮಾನಿ ಜಲಾಶಯ ಭಾಗದಲ್ಲಿ ವರಾಹಿ ದಂಡೆ ಮೇಲೆ ಕಾಂತಾರಾ 1 ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ನಟ ರಿಷಬ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ದೋಣಿ ಮಗುಚಿಕೊಂಡ ಆರೋಪ
ಮಾನಿ ಜಲಾಶಯದ ವ್ಯಾಪ್ತಿಯಲ್ಲಿ ಶನಿವಾರ ಕಾಂತಾರಾ 1 ಚಿತ್ರೀಕರಣದ ವೇಳೆ ದೋಣಿ ಮುಳುಗಿ ಕ್ಯಾಮರಾ ಮತ್ತು ಚಿತ್ರತಂಡದ ಕೆಲವರು ನೀರಿಗೆ ಬಿದ್ದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕ್ಯಾಮರಾ ಮತ್ತು ಉಪಕರಣಗಳು ನೀರುಪಾಲಾಗಿವೆ ಎಂದು ಹೇಳಲಾಗಿತ್ತು.
ಚಿತ್ರೀಕರಣ ಸ್ಥಳಕ್ಕೆ ಪೊಲೀಸ್ ಭೇಟಿ
ಘಟನೆ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾದ ಬೆನ್ನಿಗೆ ಹೊಸನಗರ ತಾಲೂಕಿನ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗಿದೆಯೆ ಎಂದು ಚಿತ್ರತಂಡದಿಂದ ಮಾಹಿತಿ ಪಡೆದರು. ಅಲ್ಲದೇ ಶನಿವಾರದ ಘಟನೆ ಕುರಿತು ವಿಸ್ತೃತವಾಗಿ ವಿವರಣೆ ಪಡೆದರು.
ಚಿತ್ರತಂಡಕ್ಕೆ ನೊಟೀಸ್ ಜಾರಿಗೆ ಸಿದ್ಧತೆ
ವರಾಹಿ ನದಿ ದಂಡೆ ಮೇಲೆ ಕಾಂತಾರಾ 1 ಸಿನಿಮಾದ ಚಿತ್ರೀಕರಣಕ್ಕೆ ಸೆಟ್ ನಿರ್ಮಿಸಲಾಗಿದೆ. ದೋಣಿ ಮುಳುಗಿರುವ ಕುರಿತು ವರದಿಯಾದ ಬೆನ್ನಿಗೆ ಶಿವಮೊಗ್ಗ ಜಿಲ್ಲಾಡಳಿತ ಚಿತ್ರತಂಡಕ್ಕೆ ನೊಟೀಸ್ ನೀಡಲು ಸಿದ್ಧತೆ ನಡೆಸಿದೆ. ಚಿತ್ರೀಕರಣಕ್ಕೆ, ಸೆಟ್ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆಯೆ ಎಂದು ನೊಟೀಸ್ ನೀಡಲು ಸಜ್ಜಾಗಿದೆ.
ಚಿತ್ರತಂಡದಿಂದ ಹೊರಬಿತ್ತು ಸ್ಪಷ್ಟನೆ
ಇನ್ನು, ಜಿಲ್ಲಾಡಳಿತ ನೊಟೀಸ್ ನೀಡಲು ಸಜ್ಜಾಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾಂತಾರಾ 1 ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸಂ ಸ್ಪಷ್ಟನೆ ನೀಡಿದೆ. ಕಾರ್ಯನಿರ್ವಾಹಕ ನಿರ್ಮಾಪಕ ಆದರ್ಶ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಆದರ್ಶ್ ಹೇಳಿದ್ದೇನು? ಇಲ್ಲಿದೆ 4 ಪಾಯಿಂಟ್.
ವರಾಹಿ ನದಿ ದಂಡೆ ಮೇಲೆ ಹಡಗಿನ ಮಾದರಿ ನಿರ್ಮಿಸಲಾಗಿತ್ತು. ಗಾಳಿ, ಮಳೆಗೆ ಹಡಗಿನ ಸೆಟ್ ಕುಸಿದು ಬಿತ್ತು. ಆಗ ಸ್ಥಳದಲ್ಲಿ ಚಿತ್ರತಂಡದ ಯಾರೂ ಇರಲಿಲ್ಲ. ಹಾಗಾಗಿ ಯಾರಿಗು ಸಮಸ್ಯೆಯಾಗಿಲ್ಲ.
ಚಿತ್ರೀಕರಣಕ್ಕೆ ಅಗತ್ಯವಾದ ಅನುಮತಿ ಪಡೆಯಲಾಗಿದೆ. ಪೊಲೀಸ್, ಅರಣ್ಯ ಇಲಾಖೆ, ಕರ್ನಾಟಕ ಪವರ್ ಕಾರ್ಪೊರೇಷನ್ನಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡು ಚಿತ್ರೀಕರಣ ನಡೆಸುತ್ತಿದ್ದೇವೆ.
ನೀರಿನ ಭಾಗದಲ್ಲಿ ಚಿತ್ರೀಕರಣ ನಡೆಸುತ್ತಿಲ್ಲ. ಆದರೂ ಮುಂಜಾಗ್ರತ ಕ್ರಮವಾಗಿ ಸ್ಪೀಡ್ ಬೋಟ್, ನುರಿತ ಈಜುಗಾರರು, ಸ್ಕೂಬಾ ಡೈವರ್ಸ್ಗಳನ್ನು ನಿಯೋಜನೆ ಮಾಡಿಕೊಂಡಿದ್ದೇವೆ. ಲೈಫ್ ಜಾಕೆಟ್ಗಳನ್ನು ಇರಿಸಿಕೊಂಡಿದ್ದೇವೆ.
ಕ್ಯಾಮರಾ, ಸಿನಿಮಾ ಸೆಟ್ನ ಉಪಕರಣಗಳು ಯಾವುದು ಮುಳುಗಡೆಯಾಗಿಲ್ಲ. ಇವತ್ತೂ ಚಿತ್ರೀಕರಣ ನಡೆಯುತ್ತಿದೆ ಎಂದು ಹೊಂಬಾಳೆ ಫಿಲ್ಸಂನ ಕಾರ್ಯನಿರ್ವಾಹಕ ನಿರ್ಮಾಪಕ ಆದರ್ಶ್ ತಿಳಿಸಿದ್ದಾರೆ.
ಚಿತ್ರತಂಡಕ್ಕೆ ಅನುಮತಿ ಸಂಕಷ್ಟ
ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗಿದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ಆದರೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿಲ್ಲ ಎಂದು ಅಧಿಕಾರಿಗಳ ಆರೋಪ. ‘ಜಿಲ್ಲಾಧಿಕಾರಿ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಚಿತ್ರೀಕರಣದ ಕುರಿತು ಮಾಹಿತಿ ನೀಡಿಲ್ಲ. ಅನುಮತಿಯನ್ನು ಪಡೆದಿಲ್ಲ. ಇದೇ ಕಾರಣಕ್ಕೆ ನೊಟೀಸ್ ನೀಡಲಾಗುತ್ತಿದೆʼ ಎಂದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದ್ದಾರೆ.
ಕಾಂತಾರಾಗೆ ತಪ್ಪದ ಸಂಕಷ್ಟ
ಕಾಂತಾರಾ 1 ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದ ಮೂವರು ಕಲಾವಿದರು ಸಾವನ್ನಪ್ಪಿದ್ದಾರೆ. ವರಾಹಿ ನದಿ ದಂಡೆ ಮೇಲೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಕೇರಳದ ಮಿಮಿಕ್ರಿ ಕಲಾವಿದ ವಿಜು.ವಿ.ಕೆ. ಹೃದಯಾಘಾತದಿಂದ ಮೃತಪಟ್ಟಿದ್ದರು. ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಯಲ್ಲಿ ಅವರ ಮೃತದೇಹ ಇರಿಸಲಾಗಿತ್ತು. ಈಗ ಸೆಟ್ ಕುಸಿದ ಪ್ರಕರಣ ಕಾಂತಾರಾ ಚಿತ್ರತಂಡಕ್ಕೆ ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ತಾಳಗುಪ್ಪ ರೈಲುಗಳು ಮಾರ್ಗ ಮಧ್ಯೆ ನಿಯಂತ್ರಣ, ಯಾವ್ಯಾವ ದಿನ? ಎಷ್ಟು ನಿಮಿಷ ನಿಯಂತ್ರಣ?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200