ಹೊಸನಗರ: ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸುತ್ತಿದ್ದ ಖಾಸಗಿ ಬಸ್ಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ, ಲಾರಿ ಚಾಲಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕ ಅನ್ಸರ್ ಬಾಷಾ (48) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಸ್ ಕಂಪನಿಯ ಮಾಲೀಕರೊಂದಿಗೆ ಚರ್ಚಿಸಬೇಕಿದ್ದ ಹಿನ್ನೆಲೆ ತಡವಾಗಿ ಪ್ರಕರಣ ದಾಖಲಾಗಿದೆ.

ಹೇಗಾಯ್ತು ಘಟನೆ?
ಜೂನ್ 21ರ ಸಂಜೆ ಕೊಲ್ಲೂರು-ನಿಟ್ಟೂರು ಮಾರ್ಗವಾಗಿ ಶ್ರೀ ದುರ್ಗಾಂಬ ಬಸ್ ತೆರಳುತ್ತಿತ್ತು. ಅರಮನೆಕೊಪ್ಪ ಗ್ರಾಮದ ಮಂಗನಹಳ್ಳಿ ಕ್ರಾಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಲಾಗುತ್ತಿತ್ತು. ಈ ವೇಳೆ ಎದುರುಗಡೆಯಿಂದ ಬಂದ ಲಾರಿ ತಿರುವಿನಲ್ಲಿ ಏಕಾಏಕಿ ತಿರುವು ಪಡೆದುಕೊಂಡಿದ್ದರಿಂದ ನಿಯಂತ್ರಣ ತಪ್ಪಿ ಬಲಮಗ್ಗುಲಾಗಿ ಪಲ್ಟಿಯಾಗಿ ಬಸ್ಸಿನ ಮಧ್ಯಭಾಗಕ್ಕೆ ಡಿಕ್ಕಿ ಹೊಡೆದಿತ್ತು ಎಂದು ಆರೋಪಿಸಲಾಗಿದೆ.
ಅಪಘಾತದ ತೀವ್ರತೆಗೆ ಬಸ್ನಲ್ಲಿದ್ದ ಕುಂದಾಪುರ ತಾಲೂಕಿನ ಶಿವರಾಮ ಗಾಣಿಗ (70) ಎಂಬುವವರ ತಲೆ ಹಾಗೂ ಎದೆಗೆ ಪೆಟ್ಟಾಗಿತ್ತು. ಲಾರಿ ಚಾಲಕ ಅನ್ಸರ್ಗೂ ತಲೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ನಗರದ ಸಂಯುಕ್ತ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈಗ ಬಸ್ ಚಾಲಕ ರಮೇಶ್ ಅವರ ದೂರಿನ ಹಿನ್ನಲೆ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ.