ಸಾಗರ: ಬಿದರೂರು ಜಿನಮಂದಿರ (Jinamandira) ಹಾಗೂ ನೂತನ ಮಾನಸ್ತಂಭೋಪರಿ ಚರ್ತುಮುಖ ಜಿನಬಿಂಬಗಳ ಪಂಚಕಲ್ಯಾಣ ಮಹೋತ್ಸವವು ಬಿದರೂರು ಬಸ್ತಿಯಲ್ಲಿ ಏ.23ರಿಂದ 29ರವರೆಗೆ ನಡೆಯಲಿದೆ ಎಂದು ಸಮಿತಿಯ ಯಶೋಧರ ಇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ 108 ಪುಣ್ಯಸಾಗರ ಮಹಾರಾಜರು ಹಾಗೂ ಸೋಂದಾ ಜೈನಮಠದ ಸ್ವಸ್ತಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಇದನ್ನೂ ಓದಿ : ‘ದೇಶದ ಮಹಿಳೆಯರ ಪಾಲಿಗೆ ಇದು ಐತಿಹಾಸಿಕ ಹೆಜ್ಜೆ’
ಏ.23ರಂದು ಇಂದ್ರ ಪ್ರತಿಷ್ಠೆಯಿಂದ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. 24ರಂದು ಯಾಗಶಾಲೆ ಉದ್ಘಾಟನೆ ಮತ್ತು ಜಿನಮಂದಿರ ಧಾಮ ಸಂಪ್ರೋಕ್ಷಣೆ ನಡೆಯಲಿದೆ. 25ರಂದು ನಿತ್ಯಪೂಜೆ, ರಾಜಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಏ.26ರಂದು ಕ್ಷೇತ್ರಪಾಲ, ನಾಗಪ್ರತಿಷ್ಠೆ ಮತ್ತು ಜನ್ಮಕಲ್ಯಾಣ, ಏ. 27ರಂದು ಸಾಮೂಹಿಕ ವ್ರತಸ್ವೀಕಾರ, ವಲಯ ಆರಾಧನೆ, ರಾಜ್ಯಾಭಿಷೇಕ ದೀಕ್ಷಾ ನಡೆಯಲಿವೆ. ಏ.29ರಂದು ಕೇವಲಜ್ಞಾನ ಕಲ್ಯಾಣ, ಮಂತ್ರನ್ಯಾಸ, ಮಾನಸ್ತಂಭೋಪರಿ ಜಿನಬಿಂಬ ಸ್ಥಾಪನೆ, ಕುಷ್ಮಾಂಡಿನಿ ಮತ್ತು ಪದ್ಮಾವತಿ ದೇವಿ ಪ್ರತಿಷ್ಠಾಪನೆ, ಸಮವಸರಣ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಸಮಿತಿಯ ಎಂ.ಪಿ.ಲೋಕರಾಜ್ ಮಾತನಾಡಿ, ಪುಣ್ಯಸಾಗರ ಶ್ರೀಗಳ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. 14ಕ್ಕೂ ಹೆಚ್ಚು ಶ್ರೀಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಡಾ.ವೀರೇಂದ್ರ ಹೆಗ್ಗಡೆ, ಬಿ.ಸುಧಾಕರ್, ಅಭಯ ಪಾಟೀಲ್, ಸಂಜಯ್ ಪಾಟೀಲ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ನೇಮರಾಜ್, ಶಾಂತರಾಜ್, ವಿ.ಟಿ.ಸ್ವಾಮಿ, ಧನಪಾಲ್ ಮತ್ತಿತರರು ಉಪಸ್ಥಿತರಿದ್ದರು.

About The Editor
ನಿತಿನ್ ಆರ್.ಕೈದೊಟ್ಲು





