ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಸೋಮವಾರ ಮಳೆಯಾಗಿದೆ (Rainfall). ಇದರಿಂದ ವಾತಾವರಣ ತುಸು ತಂಪಾಗಿದ್ದರೂ, ಧಗೆ ಮುಂದುವರಿದಿದೆ. ಇನ್ನೊಂದೆಡೆ ಇವತ್ತೂ ಮಳೆಯಾಗುವ ಮುನ್ಸೂಚನೆ (Weather forecast) ಇದೆ.
ಎಲ್ಲೆಲ್ಲಿ ಹೇಗಿತ್ತು ಮಳೆ?
ಶಿವಮೊಗ್ಗ: ನಗರದಲ್ಲಿ ರಾತ್ರಿ ವೇಳೆಗೆ ಮೋಡ ಕವಿದ ವಾತಾವರಣ (Cloudy weather) ಇತ್ತು. ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಕೆಲವು ನಿಮಿಷದ ಮಳೆಯಿಂದ ವಾತಾವರಣ ತುಸು ತಂಪಾಗಿತ್ತು. ಭದ್ರಾವತಿ ತಾಲೂಕಿನ ಹಲವೆಡೆ ಮಳೆಯಾದ ವರದಿಯಾಗಿದೆ.

ಮಿಂಚು, ಗುಡುಗು ಸಹಿತ ಮಳೆ
ಸಾಗರ: ತ್ಯಾಗರ್ತಿ ಗ್ರಾಮದ ಸುತ್ತಮುತ್ತ ಸೋಮವಾರ ಸಂಜೆ ಮಿಂಚು, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ (Thunderstorm). ಬಿಸಿಲಿನ ಧಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ಮಳೆಯು ತಂಪೆರೆಯಿತು. ಇನ್ನು, ತ್ಯಾಗರ್ತಿಯ ಕೋಟಿ ಪರಶುರಾಮ ಎಂಬುವವರಿಗೆ ಸೇರಿದ ಹಸು ಸಿಡಿಲು ಬಡಿದು (Lightning strike) ಮೃತಪಟ್ಟಿದೆ. ಹೊಸನಗರ, ಆನಂದಪುರದಲ್ಲೂ ಮಳೆಯಾಗಿದೆ.
ಬಿರುಗಾಳಿ ಮಳೆ, ಉರುಳಿದ ಮರ
ಆನವಟ್ಟಿ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವು ಮನೆಗಳ ಮೇಲ್ಛಾವಣಿಯ ಹಂಚುಗಳು ಹಾಗೂ ತಗಡಿನ ಶೆಡ್ಗಳು ಹಾರಿಹೋಗಿವೆ. ಬಿರುಗಾಳಿಯ ತೀವ್ರತೆಗೆ ಕೆಲವು ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ (Property damage) ಉಂಟಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ವಿದ್ಯುತ್ ಸಂಪರ್ಕ ಕಡಿತ
ಆನವಟ್ಟಿಯ ತಿಮ್ಮಾಪುರ ಬಡಾವಣೆಯ ಸುತ್ತಮುತ್ತ ಗಾಳಿ ಮಳೆಯ ರೌದ್ರಾವತಾರ ಜೋರಾಗಿತ್ತು. ಅರಣ್ಯ ಇಲಾಖೆ ಕಚೇರಿ ಹಾಗೂ ಕೆಪಿಎಸ್ ಶಾಲೆಯ ಮುಂಭಾಗದ ಪ್ರಮುಖ ಬೀದಿಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದಿವೆ. ಇದರಿಂದಾಗಿ ಪಟ್ಟಣದಾದ್ಯಂತ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ (Power outage). ಮೆಸ್ಕಾಂ ಇಲಾಖೆಯು ವಿದ್ಯುತ್ ಮಾರ್ಗಗಳ ದುರಸ್ತಿಗೆ (Infrastructure repair) ಕ್ರಮ ಕೈಗೊಂಡಿದೆ.
