ಸಾಗರ: ಪಟ್ಟಣದ ಜೆ.ಪಿ.ನಗರದಲ್ಲಿ ಮೇ 15ರಂದು ಮೃತಪಟ್ಟಿದ್ದ ಪರಶುರಾಮ ಅವರ ಸಾವಿನ ಪ್ರಕರಣವು ಪುನರ್ ಪರಿಶೀಲನೆಯಲ್ಲಿ ಕೊಲೆ ಎಂದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಸಾಗರ ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರಂಭದಲ್ಲಿ ಪರಶುರಾಮ ಅವರ ಸಾವು ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಆದರೆ, ಸ್ಥಳೀಯ ಮಟ್ಟದಲ್ಲಿ ವ್ಯಕ್ತವಾದ ಅನುಮಾನಗಳ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಮರುಪರಿಶೀಲಿಸಿದಾಗ ಕೊಲೆ ನಡೆದಿರುವುದು ಪತ್ತೆಯಾಗಿದೆ.

ಇಲ್ಲಿದೆ ಕೇಸ್ನ ಪ್ರಮುಖಾಂಶ
- ಪೊಲೀಸರ ಮಾಹಿತಿ ಪ್ರಕಾರ, ಪರಶುರಾಮ ಹಾಗೂ ಮಂಜುನಾಥ ಅಲಿಯಾಸ್ ಟೀಪುಡಿ ಮಂಜು ನಡುವೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಇತ್ತು.
- ಮೇ 15ರಂದು ಇದೇ ವಿಷಯವಾಗಿ ಜಗಳ ನಡೆದು ಪರಶುರಾಮ ಹಾಗೂ ಮಂಜುನಾಥ ಪರಸ್ಪರ ಘರ್ಷಣೆಗೆ ಇಳಿದಿದ್ದರು. ಈ ಸಂದರ್ಭ ಮಂಜುನಾಥ ಚಾಕುವಿನಿಂದ ಪರಶುರಾಮನಿಗೆ ಇರಿದಿದ್ದಾನೆ ಎನ್ನಲಾಗಿದೆ.
- ಗಾಯಗೊಂಡ ಪರಶುರಾಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಆಗ ಇದನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು.
ತನಿಖೆ ವೇಳೆ ಅಸಲಿ ವಿಚಾರ ಬಯಲು
ಪ್ರಕರಣದ ತನಿಖೆ ವೇಳೆ ಸಾವಿಗೆ ಕಾರಣ ಕೊಲೆ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಮಂಜುನಾಥ ಅಲಿಯಾಸ್ ಟೀ ಪುಡಿ ಮಂಜು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ, ಪ್ರಕರಣದ ಮಾಹಿತಿ ತಿಳಿದಿದ್ದರೂ ಮುಚ್ಚಿಟ್ಟ ಆರೋಪದ ಮೇಲೆ ಪರಶುರಾಮ ಅವರ ಪತ್ನಿ ಚೈತ್ರಾ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
