ಶಿವಮೊಗ್ಗ ಲೈವ್.ಕಾಂ | SAGARA NEWS | 08 FEBRUARY 2021 ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಾಗರದಲ್ಲಿ ಪ್ರತಿಭಟನೆ (protest) ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡಸಿ ಸಾಗರ ಹೊಟೇಲ್ ಸರ್ಕಲ್ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಎತ್ತಿನಗಾಡಿ, ಸೈಕಲ್ ಸವಾರಿ, ಗ್ಯಾಸ್ ಸಿಲಿಂಡರ್ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಾಯಿತು.
ಸಭೆಯಲ್ಲಿ ಯಾರೆಲ್ಲ ಏನೇನು ಹೇಳಿದರು?
‘ಬ್ರಿಟೀಷರು ಹೀಗೆ ಮಾಡಿರಲಿಲ್ಲ’
ದೆಹಲಿಯಲ್ಲಿ ರೈತರ ಹೋರಾಟ ಹತ್ತಿಕ್ಕಲು ರಸ್ತೆಗೆ ಮೊಳೆ ಹೊಡೆಯಲಾಗಿದೆ. ಬ್ರಿಟೀಷರು ಕೂಡ ಹೀಗೆ ಮಾಡಿರಲಿಲ್ಲ. ಹಿರಿಯರ ತ್ಯಾಗ, ಬಲಿದಾನದಿಂದ ಲಭಿಸಿದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರಕ್ಕೇರಿರುವ ಪ್ರಧಾನಿ ಮೋದಿ, ರೈತರು, ಜನರ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾದರೆ ಪ್ರಶ್ನಿಸುವ ಹಕ್ಕನ್ನೆ ಕಸಿದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
‘ಸಾಗರವನ್ನು ಬಾರ್ ತಾಲೂಕು ಮಾಡ್ತಾರೆ’
ಒಂದು ದೇಶ, ಒಂದು ತೆರಿಗೆ ಘೋಷಣೆಯೊಂದಿಗೆ ಜಿಎಸ್ಟಿ ಜಾರಿಗೆ ತಂದರು. ಪೆಟ್ರೋಲನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಟ್ಟರು. ಈಗ ಪೆಟ್ರೋಲ್ ಮೇಲೆ ಹೆಚ್ಚು ತೆರಿಗೆ ವಿಧಿಸಿ ಜನರು ಬದುಕೋಕೆ ಆಗದ ಹಾಗೆ ಮಾಡಿದ್ದಾರೆ. ಸಮಸ್ಯೆಯಲ್ಲಿರುವ ಜನರ ನೋವು ಆಲಿಸುವ ಬದಲು ಸ್ಥಳೀಯ ಶಾಸಕರು ಗ್ರಾಮ ಪಂಚಾಯಿತಿಗೊಂದು ಬಾರ್ ತೆರೆಯುವುದರಲ್ಲೇ ಆಸಕ್ತರಾಗಿದ್ದಾರೆ. ಹೀಗೆ ಮುಂದುವರೆದರೆ ಸಾಗರವನ್ನು ಬಾರ್ ತಾಲೂಕು ಮಾಡುತ್ತಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
‘ಪ್ರಚಾರಕ್ಕೆ ಸೀಮಿತವಾದ ಶಾಸಕರು’
ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಶಾಸಕರು ಕೇವಲ ಪ್ರಚಾರಕ್ಕೆ ಸೀಮಿತವಾಗಿದ್ದಾರೆ. ಕೆರೆ ವಿಚಾರದಲ್ಲಿ, ಅದನ್ನು ನಿರ್ಮಿಸಿದ ಶಿವಪ್ಪನಾಯಕ ಕೂಡ ಇಷ್ಟೊಂದು ಪ್ರಚಾರ ಪಡೆದಿರುವ ಸಾದ್ಯತೆ ಇಲ್ಲ. ಕೆರೆಯಲ್ಲಿ ಜೋಂಡು ತೆಗೆದು ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ರಾತ್ರಿ ಗುಡುಗು, ಮಿಂಚು ಸಹಿತ ಜೋರು ಮಳೆ, ಹಲವೆಡೆ ಮುಂದುವರೆದ ವರ್ಷಧಾರೆ
ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಕುಮಾರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಟಿ.ತಿಮ್ಮಪ್ಪ, ಮಕ್ಬೂಲ್ ಅಹಮದ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
