ಸಾಗರ: ಸಿಗಂದೂರ ಸೇತುವೆ (Sigandur Bridge) ಲೋಕಾರ್ಪಣೆ ಆಗುತ್ತಿದ್ದಂತೆ ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಲಾಂಚ್ ಸೇವೆ ಸ್ಥಗಿತಗೊಂಡಿದೆ. ಪ್ರವಾಸಿಗರು, ಸಿಗಂದೂರು ದೇವಸ್ಥಾನಕ್ಕೆ ಅಗಮಿಸುವ ಭಕ್ತರು, ಸ್ಥಳೀಯರು ಈಗ ಸೇತುವೆ ಮೇಲೆ ಸಂಚಾರ ಆರಂಭಿಸಿದ್ದಾರೆ. ಈ ಭಾಗದ ಪ್ರಮುಖ ಆಕರ್ಷಣೆಯಾಗಿದ್ದ ಲಾಂಚ್ಗಳು (Sigandur Launch) ಮೂಲೆಗುಂಪಾಗಿದ್ದು, ನೂತನ ಸೇತುವೆ ಆ ಜಾಗ ಆಕ್ರಮಿಸಿಕೊಂಡಿದೆ.
ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಶರಾವತಿ ನದಿ ದಾಟಲು ಮೂರು ಲಾಂಚ್ಗಳಿವೆ. ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಗುತ್ತಿದ್ದಂತೆ ಲಾಂಚ್ಗಳಿಗೆ ಜನ ಬರುವುದೇ ನಿಂತು ಹೋಗಿದೆ. ಹಾಗಾಗಿ ಮೂರು ಲಾಂಚ್ಗಳು ಹೊಳೆಬಾಗಿಲಲ್ಲಿ ಕೆಲಸವಿಲ್ಲದೆ ನಿಂತಿವೆ.

ದಿನಗೂಲಿ ನೌಕರರಿಗೆ ಅಸ್ಥಿರತೆ
ಲಾಂಚ್ಗಳಲ್ಲಿ ಮೂವರು ಕಾಯಂ ನೌಕರರು, 12 ದಿನಗೂಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಓರ್ವ ಕಾಯಂ ನೌಕರ ಇದೇ ತಿಂಗಳು ನಿವೃತ್ತರಾಗಲಿದ್ದಾರೆ. ಮತ್ತೊಬ್ಬರು ಇನ್ನು 10 ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಉಳಿದ ಒಬ್ಬರನ್ನು ಶರಾವತಿ ಹಿನ್ನೀರಲ್ಲೇ ಇರುವ ಇತರೆ ಲಾಂಚ್ಗಳಿಗೆ ವರ್ಗಾಯಿಸಬಹುದಾಗಿದೆ. ಆದರೆ 12 ದಿನಗೂಲಿ ನೌಕರರಿಗೆ ಮುಂದೇನು ಎಂಬುದು ಗೊತ್ತಿಲ್ಲ.

ಇದನ್ನೂ ಓದಿ » ಸಿಗಂದೂರು ಸೇತುವೆ, ಹಗಲು, ರಾತ್ರಿ ಕೆಲಸ ಮಾಡಿದ ಕಾರ್ಮಿಕರಿಗೆ ಸನ್ಮಾನ
56 ವರ್ಷದ ಲಾಂಚ್ ಸೇವೆ
1946ರಲ್ಲಿ ಹಿರೇಭಾಸ್ಕರ ಜಲಾಶಯ ನಿರ್ಮಾಣವಾಯಿತು. ಆಗ ದ್ವಿಪದ ಜನರು ಸಾಗರಕ್ಕೆ ತೆರಳಲು ಸಣ್ಣ ದೋಣಿ, ಜಂಗಲ್ (ಎರಡು ದೋಣಿ ಸೇರಿಸಿ ಹಲಗೆ ಕಟ್ಟಿ ಮಾಡಿದ ಸಾಧನ) ಬಳಸುತ್ತಿದ್ದರು.
ಜನ, ಕೃಷಿ ಉತ್ಪನ್ನಗಳನ್ನು ಇದೇ ದೋಣಿ, ಜಂಗಲ್ಗಳ ಮೂಲಕ ಆಚೆ ದಡಕ್ಕೆ ರವಾನಿಸಲಾಗುತಿತ್ತು. ಇದರಲ್ಲಿ ನದಿ ದಾಟುವಾಗ ಅವಘಡಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
1964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗುತ್ತಿದ್ದಂತೆ ಶರಾವತಿ ಹಿನ್ನೀರಿನ ಅಗಾಧತೆ ವಿಸ್ತರಣೆಯಾಯಿತು. ಹಾಗಾಗಿ ಜನರ ಓಡಾಟಕ್ಕೆ ಅನುಕೂಲವಾಗಲಿ ಎಂದು ಕರ್ನಾಟಕ ವಿದ್ಯುತ್ ನಿಗಮವು 1969ರಲ್ಲಿ ಪುಟ್ಟ ಬೋಟ್ ವ್ಯವಸ್ಥೆ ಮಾಡಿತು. ಅದರ ಬೆನ್ನಿಗೆ ಸಣ್ಣ ಲಾಂಚ್ ಸಂಚಾರ ಆರಂಭವಾಯಿತು.

1976ರಲ್ಲಿ ಒಳನಾಡು ಮತ್ತು ಜಲಸಾರಿಗೆ ಇಲಾಖೆಗೆ ಲಾಂಚ್ಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಯಿತು. 2012ರಲ್ಲಿ ಸರ್ಕಾರವು ಹೆಚ್ಚುವರಿಯಾಗಿ ಮತ್ತೊಂದು ಲಾಂಚ್ ವ್ಯವಸ್ಥೆ ಮಾಡಿತು.
ಮೊದಲಿಗೆ ಲಾಂಚ್ನಲ್ಲಿ ಓಡಾಟಕ್ಕೆ 10 ಪೈಸೆ ಟಿಕೆಟ್ ಇತ್ತು. ಈಗ ಲಾಂಚ್ನಲ್ಲಿ ಓಡಾಡಲು ₹10 ಪಡೆಯಲಾಗುತ್ತಿದೆ.
ಸಿನಿಮಾಗಳಲ್ಲು ಕಾಣಿಸಿತ್ತು ಲಾಂಚ್
ಸಿಗಂದೂರು ಲಾಂಚ್ಗಳು ಅನೇಕ ಸಿನಿಮಾಗಳಲ್ಲು ಕಾಣಿಸಿಕೊಂಡಿವೆ. ಹಲವು ದೊಡ್ಡ ಸ್ಟಾರ್ಗಳ ಸಿನಿಮಾಗಳಲ್ಲಿ ಒಂದೊಂದು ದೃಶ್ಯದಲ್ಲಿ ಲಾಂಚ್ಗಳು ಕಾಣಿಸಿಕೊಂಡಿವೆ. ಇನ್ನು, ಹಲವರು ತಾರೆಯರು, ಮುಖ್ಯಮಂತ್ರಿಗಳು, ಸಚಿವರು, ಸಂಸದರು ಸೇರಿ ಹಲವು ಪ್ರಮುಖರು ಈ ಲಾಂಚ್ಗಳಲ್ಲಿ ಸಂಚರಿಸಿ ಖುಷಿ ಪಟ್ಟಿದ್ದರು.

ಇದನ್ನೂ ಓದಿ » ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ, ಕೇಬಲ್ ಬ್ರಿಡ್ಜ್ ವೈಭವಕ್ಕೆ ಮನಸೋತ ಕೇಂದ್ರ ಸಚಿವ
ಅನಿಶ್ಚಿತತೆಯಲ್ಲಿ ಲಾಂಚ್ಗಳ ಸಿಬ್ಬಂದಿ
ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುತ್ತದೆ ಎಂಬಂತಾಗಿದೆ ಸಿಗಂದೂರು ಲಾಂಚ್ಗಳ ಭವಿಷ್ಯ. ಲಾಂಚ್ ಸೇವೆ ಮುಂದುವರೆಯಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪುನರುಚ್ಚರಿಸುತ್ತಿದ್ದಾರೆ. ಆದರೆ ಜನರೆ ಬಾರಿದ್ದರೆ ಲಾಂಚ್ ಸೇವೆ ಮುಂದುವರೆಯುವ ಸಾಧ್ಯತೆ ಇಲ್ಲ. ಹಾಗಾಗಿ ಇವುಗಳಲ್ಲಿ ತೇಲುವ ಹೊಟೇಲ್ ನಿರ್ಮಿಸಲಾಗುತ್ತದೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ » ಸಿಗಂದೂರು ಲಾಂಚ್ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್ಎ
ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆ ಲಾಂಚ್ ಸಿಬ್ಬಂದಿಗೆ ಭರವಸೆ ಮೂಡಿಸಿದೆ. ಆದರೆ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೆ ಅನಿಶ್ಚಿತತೆ ಮುಂದುವರೆಯಲಿದೆ.







