ಆಯನೂರು: ನಿಲ್ಲಿಸಲಾಗಿದ್ದ ಬೈಕನ್ನು ವ್ಯಕ್ತಿಯೊಬ್ಬರು ಕದ್ದು ಚಲಾಯಿಸಿಕೊಂಡು ಹೋಗಿ, ಬಿದ್ದು ಗಾಯಗೊಂಡಿದ್ದಾರೆ. ಬೈಕ್ ಕದ್ದು ಅಪಘಾತ ಎಸಗಿದ ವ್ಯಕ್ತಿಯು ಮಾನಸಿಕ ಅಸ್ವಸ್ಥ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೋಹಳ್ಳಿಯ ಸುನೀಲ್ ತಮ್ಮ ಮೂರು ವರ್ಷದ ಮಗನಿಗೆ ಚಾಕಲೇಟ್ ಕೊಡಿಸಲು ಆತನೊಂದಿಗೆ ಆಯನೂರಿನ ಅಂಗಡಿಯೊಂದಕ್ಕೆ ಬಂದಿದ್ದರು. ತಮ್ಮ ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ಮಾನಸಿಕ ಅಸ್ವಸ್ಥ ವ್ಯಕ್ತಿಯು, ಬೈಕ್ ಬಳಿ ಇದ್ದ ಸುನೀಲ್ ಅವರ ಮಗನ ಕೈಯಿಂದ ಬೈಕ್ ಕೀಲಿಯನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಕೀ ಪಡೆದ ಆತ ಆಯನೂರಿನ ಕೋಟೆ ರಸ್ತೆಯಲ್ಲಿ ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಸ್ವಲ್ಪ ದೂರ ಸಾಗುತ್ತಿದ್ದಂತೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಗಾಯಾಳುವನ್ನು ಸ್ಥಳೀಯ ಸಾರ್ವಜನಿಕರು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆಯಿಂದ ಬೈಕ್ಗೆ ಹಾನಿಯಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
