ಶಿವಮೊಗ್ಗ: ಬೈಕ್ ಅಪಘಾತದಲ್ಲಿ (Bike accident) ತೀವ್ರ ಗಾಯಗೊಂಡಿದ್ದ ಸಕ್ರೆಬೈಲಿನ ಪ್ರಕೃತಿ ಫಿಶ್ ಹೊಟೇಲ್ ಮಾಲೀಕ ವಿಜಯ್ ಕುಮಾರ್ ಇಂದು ಕೊನೆಯುಸಿರೆಳೆದಿದ್ದಾರೆ.
ವಿಜಯ್ ಕುಮಾರ್ಗೆ ಆಗಿದ್ದೇನು?
ಸೋಮವಾರ ರಾತ್ರಿ ಶಿವಮೊಗ್ಗದಿಂದ ಸಕ್ರೆಬೈಲು ಕಡೆಗೆ ತೆರಳುವಾಗ ಅಪಘಾತ ಸಂಭವಿಸಿತ್ತು. ಅರಕೆರೆ ಬಳಿ ಅಪಘಾತವಾಗಿ ವಿಜಯ್ ಕುಮಾರ್ (42) ಅವರ ತಲೆಗೆ ತೀವ್ರ ಪೆಟ್ಟಾಗಿತ್ತು (Severe head injury). ಕೂಡಲೆ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರು
ಕಳೆದ ರಾತ್ರಿಯೆ ವಿಜಯ್ ಕುಮಾರ್ ಅವರನ್ನು ಮಣಿಪಾಲದ ಆಸ್ಪತ್ರೆಗೆ (KMC Manipal) ಕರೆದೊಯ್ದು ದಾಖಲು ಮಾಡಲಾಗಿತ್ತು. ಇಂದು ಮಧ್ಯಾಹ್ನದವರೆಗೆ ಚಿಕಿತ್ಸೆ ನಡೆಯಿತು. ಆದರೆ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ವಿಜಯ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ವಿಜಯ್ ಕುಮಾರ್ ಅವರು ಸಕ್ರೆಬೈಲು ನಿವಾಸಿಯಾಗಿದ್ದಾರೆ.
ಮೀನು ಊಟಕ್ಕೆ ಫೇಮಸ್ ಹೊಟೇಲ್
ಸಕ್ರೆಬೈಲು ಆನೆ ಬಿಡಾರದ (Sakrebyle Elephant Camp) ಎದುರಿಗೆ ವಿಜಯ್ ಕುಮಾರ್ ಒಡೆತನದ ಪ್ರಕೃತಿ ಫಿಶ್ ಹೊಟೇಲ್ ಇದೆ. ಈ ಹೊಟೇಲ್ ಮೀನು ಊಟಕ್ಕೆ ಹೆಸರುವಾಸಿಯಾಗಿತ್ತು. ಆನೆ ಬಿಡಾರಕ್ಕೆ ಬರುತ್ತಿದ್ದ ಪ್ರವಾಸಿಗರು (Tourists) ಪ್ರಕೃತಿ ಹೊಟೇಲ್ನ ಮೀನು ಸವಿದು ಹೋಗುತ್ತಿದ್ದರು. ಹಲವು ಸೆಲೆಬ್ರಿಟಿಗಳು ಕೂಡ ಇಲ್ಲಿನ ಮೀನೂಟ ಮತ್ತು ವಿಜಯ್ ಕುಮಾರ್ ಅವರ ಆತಿಥ್ಯ (Hospitality) ಮೆಚ್ಚಿದ್ದರು.
