ಶಿವಮೊಗ್ಗ: ಜಮೀನು, ಗದ್ದೆ ಹಾಗೂ ತೋಟಗಳಲ್ಲಿ ಮಣ್ಣು, ಗೊಬ್ಬರ, ಬೀಜ ಸೇರಿದಂತೆ ಕೃಷಿ ಪರಿಕರಗಳ ಸಾಗಣೆಯ ಶ್ರಮದಾಯಕ ಕೆಲಸಗಳನ್ನು ಸುಲಭಗೊಳಿಸಲು ಶಿವಮೊಗ್ಗದ ಕೀಳಂಬಿ ಅಗ್ರಿಟೆಕ್ ಕಂಪನಿಯು ನೂತನ ರೋಬೋ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ ರೈತಸ್ನೇಹಿ ಯಂತ್ರದ ಅನಾವರಣ ಹಾಗೂ ನೇರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಕೀಳಂಬಿ ಅಗ್ರಿಟೆಕ್ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೀಳಂಬಿ, ‘ಕೃಷಿಕರ ಇಂದಿನ ಅಗತ್ಯ ಹಾಗೂ ಮಾರುಕಟ್ಟೆಯ ಬೇಡಿಕೆಯನ್ನು ಆಧರಿಸಿ ಈ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಕೃಷಿ ಕ್ಷೇತ್ರದ ಕಾರ್ಯಗಳನ್ನು ಮತ್ತಷ್ಟು ಸುಲಭ ಹಾಗೂ ಪರಿಣಾಮಕಾರಿಯಾಗಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.

ಈ ಯಂತ್ರವು ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿದ್ದು, ಚಾರ್ಜಿಂಗ್ ವ್ಯವಸ್ಥೆ ಹೊಂದಿರುವುದರಿಂದ ಇಂಧನಕ್ಕಾಗಿ ಬಂಕ್ಗಳಿಗೆ ಅಲೆಯುವ ಉಪಟಳ ಇರುವುದಿಲ್ಲ. ಪ್ರಾತ್ಯಕ್ಷಿಕೆ ವೇಳೆ ಯಂತ್ರದ ಭಾರ ಹೊರುವ ಸಾಮರ್ಥ್ಯ, ಬೆಳೆಗಳಿಗೆ ಔಷಧ ಸಿಂಪಡಣೆ ಮಾಡುವ ಹಾಗೂ ಕಳೆ ಕತ್ತರಿಸುವ ಯಂತ್ರಗಳನ್ನು ಇದಕ್ಕೆ ಜೋಡಿಸುವ ವಿವಿಧ ವಿಶೇಷತೆಗಳ ಕುರಿತು ರೈತರಿಗೆ ವಿಸ್ತಾರವಾಗಿ ಮಾಹಿತಿ ನೀಡಲಾಯಿತು. ಯಂತ್ರದ ಕಾರ್ಯಕ್ಷಮತೆಗೆ ಸೂಗೂರು ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.
