ಸೊರಬ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಹಸನ ಸಂಬಂಧ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸೊರಬದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ರಾಘವೇಂದ್ರ, ‘ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಸರ್ಕಾರದ ವಿರುದ್ಧ ಜನತೆ ಬೇಸತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆʼ ಎಂದು ಟೀಕಿಸಿದರು.
‘ಇತ್ತೀಚೆಗೆ ತುಮಕೂರಿನಲ್ಲಿ ಅಭಿವೃದ್ಧಿಯತ್ತ ಕರ್ನಾಟಕ ಸಮಾವೇಶ ನಡೆಸಿದರು. ಆ ಸಮಾವೇಶವು ಸಿಎಂ ಮತ್ತು ಡಿಸಿಎಂ ಸ್ಥಾನದ ಪೈಪೋಟಿಯ ಸಮಾವೇಶವಾಗಿತ್ತೇ ಹೊರತು ರಾಜ್ಯದ ಪ್ರಗತಿಗಾಗಿ ಅಲ್ಲ. ರಾಜ್ಯದ ಜನ ಅಭಿವೃದ್ಧಿ ಎಲ್ಲಿದೆ? ಎಂದು ಪ್ರಶ್ನಿಸುತ್ತಿದ್ದಾರೆʼ ಎಂದರು.

‘ದೇಶದ ಜನತೆ ಈಗ ಬುದ್ಧಿವಂತರಿದ್ದಾರೆ. ರಾಷ್ಟ್ರವಿರೋಧಿ ಚಿಂತನೆ ಉಳ್ಳ ರಾಜಕೀಯ ಪಕ್ಷಗಳನ್ನು ಜನರು ದೂರವಿಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಗಡಿ ಭಾಗಕ್ಕೆ ಫೆನ್ಸಿಂಗ್ ಹಾಕಲು ಬಿಡದ ಮಮತಾ ಬ್ಯಾನರ್ಜಿ ಅವರನ್ನು ದೇಶದ ಜನತೆ ಮೂಲೆಗುಂಪು ಮಾಡಿದ್ದಾರೆ. ದೇಶಾದ್ಯಂತ ಬದಲಾವಣೆ ಗಾಳಿ ಬೀಸುತ್ತಿದೆ. ಕರ್ನಾಟಕದಲ್ಲಿ ಉಳಿದಿರುವ ಕಾಂಗ್ರೆಸ್ ಸರ್ಕಾರವನ್ನು ಶೀಘ್ರ ಬದಲಾವಣೆ ಆಗಲಿದೆʼ ಎಂದು ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
