ತೀರ್ಥಹಳ್ಳಿ: ಗೋದಾಮಿನ (Warehouse) ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು (Theft) ಸುಮಾರು ₹1.25 ಲಕ್ಷ ಮೌಲ್ಯದ ಒಣ ಅಡಿಕೆ (Arecanut) ದೋಚಿಕೊಂಡು ಪರಾರಿಯಾಗಿದ್ದಾರೆ. ತಾಲ್ಲೂಕಿನ ರಂಜದಕಟ್ಟೆಯಲ್ಲಿ ಘಟನೆ ನಡೆದಿದೆ.
ರಂಜದಕಟ್ಟೆಯ ನಿವಾಸಿ, ಚಿಲ್ಲರೆ ಅಡಿಕೆ ವ್ಯಾಪಾರಿ ಮೊಹಮ್ಮದ್ ಅಶ್ರಫ್ ಅವರಿಗೆ ಸೇರಿದ ಅಡಿಕೆ ಕಳುವಾಗಿದೆ. ಅಶ್ರಫ್ ಅವರು ತಮ್ಮ ಮನೆಯ ಪಕ್ಕದಲ್ಲಿರುವ ಭೀಮನಕಟ್ಟೆ ಮಠಕ್ಕೆ ಸೇರಿದ ಹಳೆಯ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದರು. ಅದರಲ್ಲಿ ಅಡಿಕೆ ದಾಸ್ತಾನು ಮಾಡಲು ಗೋದಾಮನ್ನಾಗಿ ಬಳಸುತ್ತಿದ್ದರು. ಅವರು ತಮ್ಮ ನೆಂಟರ ಮನೆಗೆ ತೆರಳಿದ್ದರು. ವಾಪಸ್ ಬಂದು ಗೋದಾಮು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.


ಗೋದಾಮಿನ ಹಿಂಭಾಗದ ಮರದ ಬಾಗಿಲಿನ ಚಿಲಕವನ್ನು ಬಲವಂತವಾಗಿ ದೂಡಿ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಗೋದಾಮಿನಲ್ಲಿ 8 ಮೂಟೆಗಳಲ್ಲಿದ್ದ ಸುಮಾರು 3 ಕ್ವಿಂಟಾಲ್ ತೂಕದ ಒಣ ಅಡಿಕೆಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಇದರ ಅಂದಾಜು ಮೌಲ್ಯ ₹1,25,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೇವಸ್ಥಾನದಲ್ಲಿ ಕಾಣಿಕೆ ಹಣ ಕಳ್ಳತನ, ಹೇಗಾಯ್ತು ಘಟನೆ?
