SHIVAMOGGA LIVE NEWS | 17 JULY 2024
RAINFALL REPORT : ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಜೋರು ಮಳೆಗೆ ತುಂಗಾ, ಮಾಲತಿ ನದಿಗಳು ಅಪಾಯದ ಮಟ್ಟಕ್ಕೆ ತಲುಪಿವೆ. ವಿವಿಧೆಡೆ ಮಳೆಯಿಂದ ಹಾನಿ ಉಂಟಾಗಿದೆ. ಇನ್ನೊಂದೆಡೆ ಕರಾವಳಿ ಜಿಲ್ಲೆಗಳಿಗೆ ಇವತ್ತೂ ರೆಡ್ ಅಲರ್ಟ್ ಇದೆ. ಹಾಗಾಗಿ ತೀರ್ಥಹಳ್ಳಿಯಲ್ಲಿ ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಮಳೆಯಿಂದ ತೀರ್ಥಹಳ್ಳಿಯಲ್ಲಿ ಏನೇನಾಗಿದೆ?
ತಾಲೂಕಿನಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಜು.16ರ ವರದಿ ಪ್ರಕಾರ ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭಾರಿ ಪ್ರಮಾಣದ ಮಳೆಯಾಗಿದೆ. ಆಗುಂಬೆ – 342 ಮಿ.ಮೀ, ಆರಗ – 137.6 ಮಿ.ಮೀ, ದೇವಂಗಿ – 120 ಮಿ.ಮೀ, ಅರಳಸುರುಳಿ – 124.6 ಮಿ.ಮೀ, ಕೋಣಂದೂರು – 98.6 ಮಿ.ಮೀ, ಮಾಳೂರು – 164.7 ಮಿ.ಮೀ, ಮೇಗರವಳ್ಳಿ – 198.4 ಮಿ.ಮೀ, ತೀರ್ಥಹಳ್ಳಿ – 150.6 ಮಿ.ಮೀ, ಕನ್ನಂಗಿ – 80.4 ಮಿ.ಮೀ, ಮೃಗವಧೆ – 126.2 ಮಿ.ಮೀ, ಮಂಡಗದ್ದೆ – 78 ಮಿ.ಮೀ, ಹುಂಚದಕಟ್ಟೆ – 110.8 ಮಿ.ಮೀ ಮಳೆಯಾಗಿದೆ.
ಬೈಪಾಸ್ ರಸ್ತೆಯಲ್ಲಿ ಕುಸಿದ ತಡೆಗೋಡೆ
ರಾಷ್ಟ್ರೀಯ ಹೆದ್ದಾರಿ 169 ‘ಎ’ಯಲ್ಲಿ ಭೂಕುಸಿತವಾಗಿದ್ದು, ತಡೆಗೋಡೆ ಸಂಪೂರ್ಣ ಕುಸಿದಿದೆ. ಬಾಳೇಬೈಲು ಸೇತುವೆ ಸಂಪರ್ಕದ ರಸ್ತೆಯನ್ನು 2024ರ ಫೆಬ್ರುವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದರು. ಬೃಹತ್ ಗಾತ್ರದ ಗುಡ್ಡ ಸೀಳಿ ರಸ್ತೆ ನಿರ್ಮಿಸಲಾಗಿತ್ತು. ಗುಡ್ಡ ಜರಿಯದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಡ್ಡಲಾಗಿ ಸಿಮೆಂಟ್ ತಡೆಗೋಡೆ ನಿರ್ಮಿಸಿತ್ತು. ತಡೆಗೋಡೆ ಕುಸಿದಿದ್ದು, ಚರಂಡಿ ಬಿರುಕು ಬಿಟ್ಟಿದೆ. ಮುಂಜಾಗ್ರತೆ ಕ್ರಮವಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಗುಡ್ಡೇಕೇರಿ – ಶೃಂಗೇರಿ ಸಂಪರ್ಕ ಕಡಿತ
ಮಾಲತಿ ನದಿ ಉಕ್ಕಿ ಹರಿಯುತ್ತಿದೆ. ಕುಂದಾದ್ರಿ ಸಮೀಪದ ನಾಬಳ ಬಳಿ ಸೇತುವೆ ಮುಳುಗಿದೆ. ಹಾಗಾಗಿ ಗುಡ್ಡೇಕೇರಿ ಶೃಂಗೇರಿ ಮಾರ್ಗದ ಸಂಪರ್ಕ ಕಡಿತವಾಗಿದೆ. ಅಕ್ಕಪಕ್ಕದ ತೋಟ, ಗದ್ದೆಗಳು ಜಲಾವೃತವಾಗಿದೆ.
ತುಂಬಿ ಹರಿದ ಹಳ್ಳ, ಕೊಳ್ಳಗಳು
ಭಾರಿ ಮಳೆಗೆ ತೀರ್ಥಹಳ್ಳಿ ತಾಲೂಕಿನ ತುಂಗಾ, ಮಾಲತಿ, ಕುಶಾವತಿ, ಆಗುಂಬೆ ಸಮೀಪದ ಮಲಪಹಾರಿ, ಕನ್ನಂಗಿ ಬಳಿಯ ಕುಂಟೇಹಳ್ಳ, ಆರಗ ಸಮೀಪದ ಗೋಪಿನಾಥ ಹಳ್ಳ ತುಂಬಿ ಹರಿಯುತ್ತಿದೆ.
ಮುಳುಗುವ ಹಂತಕ್ಕೆ ರಾಮ ಮಂಟಪ
ತುಂಗಾ ನದಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಳವಾಗಿದ್ದು, ಪುರಾಣ ಪ್ರಸಿದ್ಧ ರಾಮ ಮಂಟಪ ಮುಳುಗುವ ಹಂತಕ್ಕೆ ತಲುಪಿದೆ.
ಮನೆ, ಕೊಟ್ಟಿಗೆಗಳಿಗೆ ಹಾನಿ
ಗಾಳಿ, ಮಳೆಗೆ ತಾಲೂಕಿನ ಹಲವು ಕಡೆ ಮನೆಗಳು, ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಮುತ್ತುವಳ್ಳಿ ಗ್ರಾಮದ ಪದ್ಮಾವತಿ ಅವರ ಮನೆ, ಬಾಂಡ್ಯ ಗ್ರಾಮದ ದೇವೇಂದ್ರ ಅವರಿಗೆ ಸೇರಿದ ಕೊಟ್ಟಿಗೆ, ಹುರುಳಿ ಗ್ರಾಮದ ಶಾರದಮ್ಮ ಅವರ ಮನೆ ಕುಸಿದಿದೆ. ಕಲ್ಮನೆ ಬಳಿ ಗದ್ದೆ, ತೋಟಗಳು ಜಲಾವೃತವಾಗಿವೆ. ಇನ್ನು, ತಾಲೂಕಿನ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ ⇓
ಶಿವಮೊಗ್ಗದಲ್ಲಿ ಥಂಡಿ ವಾತಾವರಣ, ತುಸು ಇಳಿದ ತಾಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ಉಷ್ಣಾಂಶ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200