SHIVAMOGGA LIVE NEWS | 16 MAY 2023
SHIMOGA : ಬಿಜೆಪಿಗೆ ಮತ ನೀಡಿದೆ ಎಂದು ಹೇಳಿದ್ದಕ್ಕೆ ಮುಸ್ಲಿಂ ಯುವಕರು ತನ್ನ ಮೇಲೆ ಹಲ್ಲೆ ಮಾಡಿ, ಆಟೋ (Auto) ಗಾಜು ಒಡೆದಿದ್ದಾರೆ ಎಂದು ಆರೋಪಿಸಿದ್ದ ಆಟೋ ಚಾಲಕ ಉಲ್ಟಾ ಹೊಡೆದಿದ್ದಾನೆ. ಆತನ ಮಾತು ನಂಬಿ ಬೆಂಬಲಕ್ಕೆ ನಿಂತಿದ್ದ ಬಿಜೆಪಿ ಮುಖಂಡರು ಮುಜುಗರಕ್ಕೀಡಾಗಿದ್ದಾರೆ.
ಬೆಳಗ್ಗೆ ಎಸ್ಪಿ ಕಚೇರಿಯಲ್ಲಿ ಹೈಡ್ರಾಮಾ
ಹಾನಿಯಾಗಿದ್ದ ಗಾಜು, ಹರಿದ ಟಾಪ್ನೊಂದಿಗೆ ಹರೀಶ್ ರಾವ್ ಎಂಬ ಚಾಲಕ ತನ್ನ ಆಟೋವನ್ನು (Auto) ಸೋಮವಾರ ಬೆಳಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತಂದಿದ್ದ. ಇದೆ ವೇಳೆ ಎಸ್ಪಿ ಕಚೇರಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡರು ಮತ್ತು ಮಾಧ್ಯಮದವರನ್ನು ನೋಡುತ್ತಿದ್ದಂತೆ ಹರೀಶ್ ರಾವ್ ಸಂಕಟ ಹೇಳಿಕೊಂಡಿದ್ದ. ʼಬಿಜೆಪಿಗೆ ಮತ ನೀಡಿದ್ದಕ್ಕೆ ತನ್ನ ಮೇಲೆ ಮೂವರು ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ. ಆಟೋ ಜಖಂ ಮಾಡಿದ್ದಾರೆʼ ಎಂದು ಕಣ್ಣೀರು ಸುರಿಸಿದ್ದ. ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆಗೆ ಮೊರೆ ಇಟ್ಟಿದ್ದ.
ಜೇಬಿನಿಂದ ಹಣ ತೆಗೆದು ಕೊಟ್ಟಿದ್ದರು
ಹರೀಶ್ ರಾವ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೆ.ಎಸ್.ಈಶ್ವರಪ್ಪ, ಆಟೋ ರಿಪೇರಿ ಮಾಡಿಸಿಕೊಳ್ಳುವಂತೆ ಜೇಬಿನಿಂದ ಹಣ ತೆಗೆದು ಕೊಟ್ಟಿದ್ದರು. ರಿಪೇರಿ ಮಾಡಿಸಿಕೊಂಡು ಮನೆ ಬಳಿ ಬಾ ಎಂದು ಸೂಚಿಸಿದ್ದರು. ಅಲ್ಲದೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದರು.
ಕಿಡಿ ಹೊತ್ತಿಸಿದ ಆಟೋ ಚಾಲಕನ ಅಳಲು
ಬಿಜೆಪಿಗೆ ಮತ ನೀಡಿದ್ದಕ್ಕೆ ಮುಸ್ಲಿಮ್ ಯುವಕರಿಂದ ಹಲ್ಲೆ ಎಂದು ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳು ಹರಿದಾಡಿದವು. ಬಿಜೆಪಿ ಮತ್ತು ಅದರ ಬೆಂಬಲಿಗರ ವಾಟ್ಸಪ್ ಗ್ರೂಪ್, ಫೇಸ್ಬುಕ್ನಲ್ಲಿ ಘಟನೆ ವಿರುದ್ಧ ಆಕ್ರೋಶ ಹೊರಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿ ಬಂದವು. ಶಿವಮೊಗ್ಗದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಟ್ವಿಟರ್ ಖಾತೆಯಲ್ಲಿಯು ಘಟನೆ ಖಂಡಿಸಿ ಪೋಸ್ಟ್ ಪ್ರಕಟವಾಯಿತು.
ಇಂದು ಶಿವಮೊಗ್ಗ ನಗರದ ಸೋಮಿನಕೊಪ್ಪದಲ್ಲಿ ಆಟೋ ಚಾಲಕ ಹರೀಶ್ ರಾವ್ ಅವರ ಮೇಲೆ ಮುಸ್ಲಿಂ ಯುವಕರಾದ ನಜರುಲ್ಲ ಹಾಗೂ ಸಂಗಡಿಗರು ಮಾಡಿರುವ ಕೃತ್ಯ ಅತ್ಯಂತ ಖಂಡನೀಯ. pic.twitter.com/A62JbfRmcO
— S N Channabasappa (Chenni) (@ChenniBjp) May 15, 2023
ಸಂಜೆ ವೇಳೆ ಉಲ್ಟಾ ಹೊಡೆದ ಚಾಲಕ
ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ನಿಜ ಸ್ಥಿತಿ ಅರಿಯಲು ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಅವರ ನೇತೃತ್ವದ ನಿಯೋಗ ವಿನೋಬನಗರ ಠಾಣೆಗೆ ಭೇಟಿ ನೀಡಿತ್ತು. ಆಗ ಎದುರಾದ ಚಾಲಕ, ಉಲ್ಟಾ ಹೊಡೆದಿದ್ದಾನೆ. ಬಿಜೆಪಿಗೆ ಮತ ನೀಡಿದ್ದಕ್ಕೆ ದಾಳಿಯಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ್ದಾನೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಆಟೋ ಚಾಲಕ ಹೇಳಿದ್ದೇನು?
ʼನಾವೆಲ್ಲ ಸ್ನೇಹಿತರು ಓಟ್ಟಿಗೆ ಎಣ್ಣೆ ಹಾಕುತ್ತಿದ್ದೆವು. ಸ್ನೇಹಿತರು ಮಧ್ಯೆ ಜಗಳವಾಗಿ ಆಗ ಆಟೋ ಟಾಪ್, ಗ್ಲಾಸ್ ಒಡೆದು ಹೋಗಿದೆ. ಅದಕ್ಕೆ ಕಂಪ್ಲೇಂಟ್ ಕೊಡಲು ಎಸ್ಪಿ ಕಚೇರಿಗೆ ಹೋಗಿದ್ದೆ. ನಾನೆಲ್ಲೂ ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹೊಡೆದರು ಎಂದು ಹೇಳಿಲ್ಲ. ಈಶ್ವರಪ್ಪ ಅವರು ದುಡ್ಡು ಕೊಟ್ಟರು. ಆದರೆ ಅದು ಎಷ್ಟಿತ್ತು ಎಂದು ಗೊತ್ತಿಲ್ಲ. ಅದನ್ನು ಯಾರೋ ಜೇಬಿನಿಂದ ಎತ್ತಿಕೊಂಡು ಹೋಗಿದ್ದಾರೆʼ ಎಂದು ಆಟೋ ಚಾಲಕ ಹರೀಶ್ ರಾವ್ ಹೇಳಿಕೆ ನೀಡಿದ್ದಾನೆ.
ವೈರಲ್ ಆಯ್ತು ಡ್ರಾಮಾ ವಿಡಿಯೋ
ಆಟೊ ಚಾಲಕ ಹರೀಶ್ ರಾವ್ ದೂರು ನೀಡಲು ಬಂದಾಗ ನಡೆದ ಘಟನೆ ಮತ್ತು ಸಂಜೆ ಆತ ಉಲ್ಟಾ ಹೊಡೆದ ವಿಡಿಯೋಗಳು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದನ್ನು ಷೇರ್ ಮಾಡಿರುವ ಹಲವರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ – ಮಧ್ಯರಾತ್ರಿ 12.30ಕ್ಕೆ ಮಾಜಿ ಸಚಿವ ಈಶ್ವರಪ್ಪಗೆ ಮಿಸ್ಡ್ ಕಾಲ್, ಎಸ್ಪಿಗೆ ದೂರು, ಎಲ್ಲಿಂದ ಬಂದಿತ್ತು ಫೋನ್?
ಕುಡಿದ ಮತ್ತಿನಲ್ಲಿ ಆಟೋ ಚಾಲಕನ ಹೈ ಡ್ರಾಮಾ ಮತ್ತು ಅದಕ್ಕೆ ಬೆಂಬಲವಾಗಿ ನಿಂತವರು ಈಗ ಪೇಚಿಗೆ ಸಿಲುಕಿದ್ದಾರೆ.