SHIVAMOGGA LIVE NEWS | 14 MARCH 2024
SAGARA : ಸೊರಬ ರಸ್ತೆಯ ಯುನೈಟೆಡ್ ಟ್ರೇಡಿಂಗ್ ಕಂಪನಿಯ ಕಟ್ಟಡದ ಹಿಂದಿನ ಬಾಗಿಲು ಒಡೆದು 17 ಲಕ್ಷ ರೂ. ಮೊತ್ತದ ಸಿಗರೇಟ್ ಬಂಡಲ್ ಕಳವು ಮಾಡಿದ್ದ ವ್ಯಕ್ತಿಯನ್ನು ಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಜಲೋರ್ ಜಿಲ್ಲೆಯ ಮಾಂಡವಾಲ ಗ್ರಾಮದ ಜಿತೇಂದ್ರ ಕುಮಾರ್ ಬಂಧಿತ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರು ತಲೆಮರೆಸಿಕೊಂಡಿದ್ದಾರೆ.
ವಾಹನದ ನಂಬರ್ ನೀಡಿದ ಸುಳಿವು
ಕಳೆದ ವರ್ಷದ ಮೇ 18ರಂದು ಕಳ್ಳತನ ನಡೆದಿತ್ತು. ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಕೃತ್ಯಕ್ಕೆ ಬಳಸಿದ ವಾಹನದ ನಂಬರ್ ಸೆರೆಯಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ. ದೊಡ್ಡ ಮೊತ್ತದ ಸಿಗರೇಟ್ ಸಗಟು ವ್ಯಾಪಾರ ನಡೆಯುತ್ತಿದ್ದ ಸ್ಥಳಗಳ ಮಾಹಿತಿ ಸಂಗ್ರಹಿಸಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ರಾಜ್ಯದ ವಿವಿಧೆಡೆ ಇದೇ ರೀತಿ ಕಳ್ಳತನ ಮಾಡಿರುವ ಶಂಕೆ ಇದೆ. ಕಳವು ಮಾಡಿದ್ದ ಸಿಗರೇಟ್ ಮಾರಾಟ ಮಾಡಿ ಗಳಿಸಿದ್ದ 6 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ – ಆಗುಂಬೆಯಲ್ಲಿ ಟೀ ಕುಡಿದು ಬಸ್ ಹತ್ತಿದ ಪ್ರಯಾಣಿಕನಿಗೆ ಕಾದಿತ್ತು ಆಘಾತ, ವಿಷಯ ತಿಳಿದು ಶಿವಮೊಗ್ಗದ ವ್ಯಕ್ತಿ ಸ್ಥಳಕ್ಕೆ ದೌಡು
ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ ಮೇಲ್ವಿಚಾರಣೆಯಲ್ಲಿ, ಸಾಗರ ಠಾಣೆ ಇನ್ಸ್ಪೆಕ್ಟರ್ ಜೆ.ಬಿ.ಸೀತಾರಾಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಿ.ಎಸ್.ಐಗಳಾದ ಮಹೇಶ ಕುಮಾರ್, ಸಂತೋಷ್ ಬಾಗೋಜಿ ಮತು ಲಕ್ಷ್ಮಣ, ಎಎಸ್ಐ ಸೈಯದ್ ಇಮ್ರಾನ್, ಸಿಬ್ಬಂದಿ ರತ್ನಾಕರ, ಷೇಖ್ ಪೈರೋಜ್ ಅಹಮದ್, ಶ್ರೀಧರ, ವಿಕಾಶ್, ವಿಶ್ವನಾಥ, ಕೃಷ್ಣಮೂರ್ತಿ, ಮೆಹಬೂಬ್ ಮತ್ತು ಶಿಲ್ಪಾ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.