ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ನವೆಂಬರ್ 2021
ಪ್ರತಿ ದಿನ ತಮಗೆ ಮಾಮೂಲಿ ಕೊಡಬೇಕು. ಇಲ್ಲವಾದಲ್ಲಿ ಪೆಟ್ರೋಲ್ ಸುರಿದು ಹೆಂಡತಿ, ಮಕ್ಕಳ ಸಹಿತ ಅಂಗಡಿಯನ್ನು ದಹಿಸಿ ಬಿಡುತ್ತೇವೆ ಎಂದು ವ್ಯಾಪಾರಿಯೊಬ್ಬರಿಗೆ ಯುವಕರು ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ವ್ಯಾಪಾರಿಯ ತಲೆಗೆ ಚಾಕುವಿನಿಂದ ಗಾಯಗೊಳಿಸಿದ್ದಾರೆ.
ಶಿವಮೊಗ್ಗದ ಮಿಳಘಟ್ಟ ಮುಖ್ಯರಸ್ತೆಯಲ್ಲಿನ ದಿನಸಿ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಬೀಮಾನಂದ ಶೆಟ್ಟಿ ಎಂಬುವವರಿಗೆ ಬೆದರಿಕೆಯೊಡ್ಡಿ ಹಲ್ಲೆ ಮಾಡಲಾಗಿದೆ.
ಏನಿದು ಪ್ರಕರಣ?
ಷಹಬಾಜ್, ಸುಹಾನ್, ಮುನ್ನಾ ಮತ್ತಿತರರು ಬೀಮಾನಂದ ಶೆಟ್ಟಿ ಅವರ ದಿನಸಿ ಅಂಗಡಿಗೆ ರಾತ್ರಿ ಬಂದು ಬಾಳೆಹಣ್ಣು ಸೇರಿದಂತೆ ತಿಂಡಿ, ತಿನಿಸು ತಿಂದಿದ್ದಾರೆ. ಹಣ ಕೊಡುವಂತೆ ಬೀಮಾನಂದ ಶೆಟ್ಟಿ ಅವರು ಕೇಳಿದಾಗ ಆರೋಪಿಗಳು ನಿರಾಕರಿಸಿದ್ದಾರೆ. ಅಲ್ಲದೆ ತಾವು ಈ ಏರಿಯಾದ ರೌಡಿಗಳು ತಮಗೆ ಮಾಮೂಲಿ ಕೊಡಬೇಕು ಎಂದು ಬೆದರಿಸಿದ್ದಾರೆ.
ಇದನ್ನು ವಿರೋಧಿಸಿದ್ದಕ್ಕೆ ಬೀಮಾನಂದ ಶೆಟ್ಟಿ ಅವರತ್ತ ಚಾಕು ತೋರಿಸಿ, ತಲೆ ಭಾಗಕ್ಕೆ ಚಾಕುವಿನಿಂದ ಗಾಯಗೊಳಿಸಿದ್ದಾರೆ. ಅಲ್ಲದೆ ತಮಗೆ ಮಾಮೂಲಿ ಕೊಡದಿದ್ದರೆ ಪೆಟ್ರೋಲ್ ಸುರಿದು ಹೆಂಡತಿ, ಮಕ್ಕಳು ಸಹಿತ ಅಂಗಡಿಗೆ ಬೆಂಕಿ ಹೆಚ್ಚುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ.
ಬೀಮಾನಂದ ಶೆಟ್ಟಿ ಅವರು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.