ಶಿವಮೊಗ್ಗ ಲೈವ್.ಕಾಂ | SHIMOGA | 19 ಏಪ್ರಿಲ್ 2020
ಉಸಿರಾಟದ ತೊಂದರೆಯಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಇದು ವೈದ್ಯರಲ್ಲಿ ಆತಂಕ ಉಂಟು ಮಾಡಿದೆ. ಇನ್ನು ಈ ಸಂಬಂಧ ಮೂರು ದಿನದಲ್ಲಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದ್ದಾರೆ.
ಮೂವರು ಮೃತಪಟ್ಟಿದ್ದು ಯಾವಾಗ?
ಏಪ್ರಿಲ್ ೧೭ರಂದು ಎರಡು ಗಂಟೆ ಅವಧಿಯಲ್ಲಿ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ಇವರಿಗೆ ಉಸಿರಾಟದ ತೊಂದರೆ ಇತ್ತು. ಇವರೆಲ್ಲ ಮೊದಲು ಶಿವಮೊಗ್ಗದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದಾಗಿ ಇವರನ್ನೆಲ್ಲ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕರೋನ ಆತಂಕ ದೂರ ಮಾಡಿದ ಲ್ಯಾಬ್
ಕರೋನ ಭೀತಿ ಹಿನ್ನೆಲೆ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿರಲಿಲ್ಲ. ಮೃತರ ಗಂಟಲು ದ್ರವ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿತ್ತು. ಆದರೆ ಪರೀಕ್ಷೆ ಬಳಿಕ ಕರೋನ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಬಳಿಕ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.
ಮೂರು ದಿನದಲ್ಲಿ ವರದಿ ಕೊಡಬೇಕು
ಇನ್ನು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಎರಡು ಗಂಟೆಯಲ್ಲಿ ಈ ಮೂವರು ಉಸಿರಾಟದ ತೊಂದರೆಯಿಂದ ಮೃತರಾಗಿದ್ದು ಹೇಗೆ. ಶ್ವಾಸಕೋಶ ತೊಂದರೆಯಿಂದ ಸಾವನ್ನಪ್ಪಿರಬಹುದು ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರು ಹೇಳುತ್ತಿದ್ದಾರೆ. ಅವರಿಗೂ ಈ ಕುರಿತು ಸರಿಯಾದ ಮಾಹಿತಿ ಇಲ್ಲ. ಕರೋನ ಸೋಂಕಿನ ಲಕ್ಷಣದಲ್ಲಿ ಉಸಿರಾಟದ ಸಮಸ್ಯೆಯು ಒಂದು. ಹಾಗಾಗಿ ಮೂರು ದಿನದಲ್ಲಿ ಸರಿಯಾದ ವರದಿ ಕೊಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಕರೋನ ಇಲ್ಲ
ಇನ್ನು ಜಿಲ್ಲೆಯಲ್ಲಿ ಈತನಕ ಯಾವುದೇ ಕರೋನ ಪಾಸಿಟಿವ್ ಪ್ರಕರಣಗಳು ಬಂದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕುಂದು ಕೊರತೆ ಸಭೆ ನಡೆಸಲಾಯಿತು. ಈ ವೇಳೆ ಮೂವರು ಮೃತಪಟ್ಟಿರುವ ವಿಚಾರ ಬಹಿರಂಗವಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]