ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 23 ಜುಲೈ 2019
ತೀರ್ಥಹಳ್ಳಿಯ ತುಂಬರಮನೆ ಸೇತುವೆ ಕುಸಿದಿದೆ. ಸೇತುವೆಯ ಒಂದು ಭಾಗದ ಸಂಪೂರ್ಣ ಕುಸಿದು, ದೊಡ್ಡ ಕಂದಕ ನಿರ್ಮಾಣವಾಗಿದೆ. ಇನ್ನು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಾಲ್ಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುಂಬರಮನೆ ಸೇತುವೆ, ಕುಸಿಯುವ ಹಂತಕ್ಕೆ ತಲುಪಿತ್ತು. ಈ ಕುರಿತು ಸ್ಥಳೀಯರು ಹಲವು ಬಾರಿ ಆಡಳಿತಕ್ಕೆ ಮನವಿ ಮಾಡಿದ್ದರು. ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿತ್ತು. ಆದರೆ ಆಡಳಿತದ ನಿರ್ಲಕ್ಷದಿಂದ ತುಂಬರಮನೆ ಸೇತುವೆ ಕುಸಿದಿದೆ. ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಕುಸಿದ ಸಂಪರ್ಕ ಸೇತುವೆ
ತೀರ್ಥಹಳ್ಳಿ ಮತ್ತು ಕೊಪ್ಪ ತಾಲೂಕಿನ ಶೇಡ್ಗಾರ್, ಸಾಲ್ಗಡಿ ವ್ಯಾಪ್ತಿಯ ತುಂಬರಮನೆ ಸೇತವೆ, ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗಿತ್ತು. ಈ ರಸ್ತೆಯಲ್ಲಿ ಸಾಗಿದರೆ ಕೊಪ್ಪ ತಾಲೂಕನ್ನು ಹತ್ತಿರದಿಂದ ತಲುಪಬಹುದಿತ್ತು. ಕಟ್ಟೆಹಕ್ಕಲು, ಮೃಗವಧೆ, ಶೇಡ್ಗಾರ್, ಸಾಲ್ಗಡಿ, ಹೆದ್ದೂರು ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿತ್ತು.
ಇದೇ ಸೇತುವೆ ಬಳಸಿ ಪ್ರತಿದಿನ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಸಂಚರಿಸುತ್ತಿದ್ದರು. ಅನೇಕ ವಾಹನಗಳು ಈ ರಸ್ತೆ ಮೇಲೆ ಓಡಾಡುತ್ತಿದ್ದವು. ಸೇತುವೆ ಕುಸಿಯುವ ಹಂತಕ್ಕೆ ತಲುಪಿತ್ತು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷದಿಂದ ಸೇತುವೆ ಸಂಪೂರ್ಣ ಕುಸಿದಿದೆ.
ಮಾಜಿ ಮಿನಿಸ್ಟರ್ ಸ್ಥಳಕ್ಕೆ ಭೇಟಿ
ಇನ್ನು, ತುಂಬರಮನೆ ಸೇತುವೆ ಕುಸಿತ ಸ್ಥಳಕ್ಕೆ ಇವತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೂಡಲೇ ಅಧಿಕಾರಿಗಳು ಸುಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕಿದ್ದ ಶಾಸಕರು ಕ್ಷೇತ್ರದಿಂದ ಹೊರಗಿದ್ದು, ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]