ಶಿವಮೊಗ್ಗ ಲೈವ್.ಕಾಂ | SHIMOGA / SHIKARIPURA NEWS | 7 ಡಿಸೆಂಬರ್ 2021
ಕೆರೆಯಲ್ಲಿ ಬಿದ್ದು ಇತ್ತೀಚೆಗೆ ಮೃತಪಟ್ಟಿದ್ದ ಯುವಕನ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಮೃತನ ಪಾಲಕರು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ದೂರು ನೀಡಿದ್ದಾರೆ.
ಶಿಕಾರಿಪುರ ತಾಲೂಕಿನ ಕೋಡಿಹಳ್ಳಿಯ ಸತೀಶ್ (29) ನ.30ರಂದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ. ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸತೀಶ್ ಸಾವು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಮೃತ ಸತೀಶ್ನ ತಂದೆ ಮಂಚಪ್ಪ ಅವರು ಈ ಬಗ್ಗೆ ಸೋಮವಾರ ಜಿಲ್ಲಾ ರಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೃಷಿ ಕೆಲಸ ಮಾಡಿಕೊಂಡಿದ್ದ ಸತೀಶ್ನನ್ನು ಅದೇ ಗ್ರಾಮದ ಪುಟ್ಟಪ್ಪ, ಆನಂದ ಎಂಬುವರು ಕೆಲಸವಿದೆ ಎಂದು ಕರೆದುಕೊಂಡು ಹೋಗಿದ್ದರು. ಅದೇ ದಿನ ಮಧ್ಯಾಹ್ನ 4.30ರ ಸುಮಾರಿಗೆ ಸತೀಶ್ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾಗಿ ತಿಳಿಸಿದ್ದರು. ಮೃತನ ಬಟ್ಟೆ ಮತ್ತು ಮೊಬೈಲ್ ಕೆರೆ ದಡದ ಮೇಲೆ ಇದ್ದವು. ಈ ವೇಳೆ ಪುಟ್ಟಪ್ಪ ಮತ್ತು ಆನಂದ ಜತೆಗೆ ಇಲ್ಲದೇ ಇರುವುದು ಅನುಮಾನ ಮೂಡಿಸಿದೆ. ಹಾಗಾಗಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
‘ನವೆಂಬರ್ 30ರಂದು ಹರಿಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಸತೀಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆತನ ಪಾಲಕರು ದೂರು ನೀಡಿದ್ದಾರೆ. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿಗಾಗಿ ಕಾಯುತ್ತಿದ್ದೇವೆ. ವರದಿಯಲ್ಲಿ ಕೊಲೆ ಎಂಬುದು ದೃಢಪಟ್ಟರೆ ಕೇಸ್ನ್ನು ಕೊಲೆ ಎಂದೇ ವರ್ಗಾಯಿಸಿಕೊಂಡು ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.