ಶಿವಮೊಗ್ಗದ ಲೈವ್.ಕಾಂ | THIRTHAHALLI NEWS | 3 ಫೆಬ್ರವರಿ 2022
ಮೊಬೈಲ್ ಟವರ್ ಉರುಳಿ ಬಿದ್ದು ಆರು ತಿಂಗಳು ಕಳೆದರೂ ಸರಿಪಡಿಸದ ಬಿಎಸ್ಎನ್ಎಲ್ ಅಧಿಕಾರಿಗಳ ಅಸಡ್ಡೆ ವಿರುದ್ದ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ತಾಲೂಕು ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಆರು ತಿಂಗಳಿಂದ ರಿಪೇರಿ ಇಲ್ಲ
ಭಾರಿ ಮಳೆ, ಗಾಳಿಗೆ ಮೊಬೈಲ್ ಟವರ್ ನೆಲಕ್ಕುರುಳಿತ್ತು. ಈತನಕ ಟವರ್ ರಿಪೇರಿ ಕಾರ್ಯವಾಗಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್ ವರ್ಕ್ ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನೆಟ್ ವರ್ಕ್ ಇಲ್ಲದಿರುವುದರಿಂದ ಗ್ರಾಮದಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ಫೋನ್ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂಟರ್ ನೆಟ್ ಇಲ್ಲದೆ ಪಡಿತರ ವಿತರಣೆ ವಿಳಂಬವಾಗುತ್ತಿದೆ. ಬ್ಯಾಂಕಿಂಗ್ ಸೌಲಭ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. ಆರು ತಿಂಗಳಿಂದ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ಯಾರೆ ಅನ್ನುತ್ತಿಲ್ಲ. ಆದ್ದರಿಂದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಟವರ್ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಕಾನಕೊಪ್ಪ ಮಂಜುನಾಥ್, ತುಪ್ಪದ ಮನೆ ವಿನಾಯಕ, ಪ್ರಮುಖರಾದ ಶಿವು ಹೊದಲ, ಹಂಗಾರ ಕೊಡಿಗೆ ಭಾಸ್ಕರ್ ಶೆಟ್ಟಿ, ಹೊದಲ ಗೋಪಾಲ ಭಟ್, ತಾರಾನಾಥ್ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.