SHIVAMOGGA LIVE NEWS | 17 MARCH 2024
SHIMOGA : ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಭೇಟಿ ಹಿನ್ನೆಲೆ ಅವರು ಸಾಗುವ ಮಾರ್ಗದುದ್ದಕ್ಕು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಲ್ಲೂ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ವಿವಿಧ ಗ್ರಾಮಗಳು ಮತ್ತು ಬಡಾವಣೆ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.
ಗ್ರಾಮಗಳು, ಬಡಾವಣೆಗಳಿಗೆ ದಿಗ್ಬಂಧನ
ಮಾ.18ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅಲ್ಲಮಪ್ರಭು ಮೈದಾನದವರೆಗೆ (ಫ್ರೀಡಂ ಪಾರ್ಕ್) ರಸ್ತೆ ಮಾರ್ಗದಲ್ಲಿ ತೆರಳಲಿದ್ದಾರೆ. ಮೋದಿ ಭೇಟಿ ಹಿನ್ನೆಲೆ ಒಂದು ದಿನ ಮೊದಲೆ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ವಿವಿಧ ಗ್ರಾಮಗಳು, ಬಡಾವಣೆಗಳಿಗೆ ದಿಗ್ಬಂಧನಕೊಳಗಾದಂತಾಗಿದೆ. ಮಂಡೇನಕೊಪ್ಪ, ಸೋಗಾನೆ, ಸಂತೆ ಕಡೂರು, ವಡ್ಡಿನಕೊಪ್ಪ, ಜ್ಯೋತಿನಗರ ಬಡಾವಣೆಯಿಂದ ಎನ್.ಆರ್.ಪುರ ರಸ್ತೆಗೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ, ಪೊಲೀಸರು ಮತ್ತು ಹೋಂ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ.
ಒಂದು ಯು ಟರ್ನ್ಗೆ 5 ಕಿ.ಮೀ ಹೋಗಬೇಕು
ಎಂ.ಆರ್.ಎಸ್. ಸರ್ಕಲ್ನಿಂದ ಎನ್.ಆರ್.ಪುರ ರಸ್ತೆಯಲ್ಲಿ ಎಲ್ಲ ಡಿವೈಡರ್ಗಳನ್ನು ಬಂದ್ ಮಾಡಲಾಗಿದೆ. ಎಲ್ಲ ಯು ಟರ್ನ್ಗಳಲ್ಲಿಯು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಡಿವೈಡರ್ಗಳಲ್ಲಿ ಅಳವಡಿರುವ ಬ್ಯಾರಿಕೇಡ್ಗಳನ್ನು ಸರಿಸಲು ಪೊಲೀಸರು ಅನುಮತಿ ಕೊಡುತ್ತಿಲ್ಲ.
ಶಿವಮೊಗ್ಗದಿಂದ ಪರಿಚಿತರೊಬ್ಬರ ಮನೆಗೆ ಸಂತೆ ಕಡೂರಿಗೆ ಬಂದಿದ್ದೇನೆ. ಇಲ್ಲಿ ರಸ್ತೆ ಬಂದ್ ಮಾಡಿದ್ದಾರೆ. ಗಾಡಿ ನಿಲ್ಲಿಸಿದರೆ ಪೊಲೀಸರು ಮುಂದೆ ಹೋಗುವಂತೆ ಹೇಳುತ್ತಿದ್ದಾರೆ. ಯು ಟರ್ನ್ ತೆಗೆದುಕೊಂಡು ವಾಪಸ್ ಹೋಗಲು ಕೂಡ ಅವಕಾಶ ಕೊಡುತ್ತಿಲ್ಲ. ಒಂದು ಯು ಟರ್ನ್ಗಾಗಿ ಕಾಚಿನಕಟ್ಟೆ ತನಕ ಹೋಗಬೇಕಿದೆ. ಇದೆಂತಾ ದುಸ್ಥಿತಿ?ರವಿಕುಮಾರ್, ಕಾರು ಚಾಲಕ
ಪೊಲೀಸ್, ಎಸ್ಪಿಜಿ ನಿರಂತರ ಗಸ್ತು
ಪ್ರಧಾನಿ ಸಾಗುವ ಮಾರ್ಗದುದ್ದಕ್ಕು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಪ್ರಧಾನಿ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಪಡೆ ನಿರಂತರ ಗಸ್ತು ತಿರುಗುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ ಕ್ಷೇತ್ರ, ನಾಮಪತ್ರ ಸಲ್ಲಿಕೆ ಯಾವಾಗ? ಮತದಾನದ ದಿನಾಂಕವೇನು?