ಶಿವಮೊಗ್ಗ ಲೈವ್.ಕಾಂ | BHADRAVATHI NEWS | 25 JANUARY 2021
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯಲ್ಲಿ ಕರ್ತವ್ಯನಿರತ ಗುತ್ತಿಗೆ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಕೆಲಸ ನಿಲ್ಲಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.
ಅಂಥೋಣಿ ರಾಜ್ (47) ಮೃತ ಗುತ್ತಿಗೆ ಕಾರ್ಮಿಕ. ಕರ್ತವ್ಯದಲ್ಲಿ ಇದ್ದ ವೇಳೆ ಅಂಥೋಣಿ ರಾಜ್ ಅವರಿಗೆ ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ಸೇರಿಸುವ ಪ್ರಯತ್ನವಾಯಿತಾದರೂ, ಕೊನೆಯುಸಿರೆಳೆದಿದ್ದಾರೆ.
ಕಾರ್ಮಿಕರ ಪ್ರತಿಭಟನೆ ಏಕೆ?
ಅಂಥೋಣಿ ರಾಜ್ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ಆದರೆ ಆಡಳಿತ ಮಂಡಳಿ ಇದಕ್ಕೆ ಒಪ್ಪುತ್ತಿಲ್ಲ.
ಕರ್ತವ್ಯ ನಿರ್ವಹಣೆ ವೇಳೆ ಅವಘಡ ಸಂಭವಿಸಿ ಪ್ರಾಣಹಾನಿ ಆದರಷ್ಟೇ ಪರಿಹಾರ ನೀಡಬೇಕು ಎಂದು ನಿಯಮದಲ್ಲಿದೆ. ಹಾಗಾಗಿ ಆಂಥೋಣಿ ಅವರಿಗೆ ಪರಿಹಾರ ನೀಡಲು ಆಗುವುದಿಲ್ಲ ಎಂದು ಆಡಳಿತ ಮಂಡಳಿ ವಾದಿಸುತ್ತಿದೆ.
ಕರ್ತವ್ಯದಲ್ಲಿ ಇದ್ದ ವೇಳೆಯಲ್ಲೇ ಅಂಥೋಣಿ ರಾಜ್ ಅವರಿಗೆ ಹೃದಯಾಘಾತವಾಗಿದ್ದು, ಅವರಿಗೂ ಪರಿಹಾರ ನೀಡಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಅಪ್ಪಾಜಿಗೌಡ ಪುತ್ರ ಅಜಿತ್ ಅಪ್ಪಾಜಿಗೌಡ ಸೇರಿದಂತೆ ಹಲವು ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]