ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸಾವು
HASSAN : ಗಾಯಗೊಂಡ ಕಾಡಾನೆಗೆ (Wild Elephant) ಚಿಕಿತ್ಸೆಗೆಂದು ವೈದ್ಯರೊಂದಿಗೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಬಳಿ ನಡೆದಿದೆ. ಕಾಡಾನೆ (Wild Elephant) ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿಯನ್ನು ತಕ್ಷಣ ಹಾಸನದ ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅರಣ್ಯ ಸಿಬ್ಬಂದಿ ವೆಂಕಟೇಶ್ ಮೃತ ದುರ್ದೈವಿ. ಗಾಯಗೊಂಡಿದ್ದ ಆನೆಗೆ ಅರವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜೊತೆ ವೆಂಕಟೇಶ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ವಿದ್ಯುತ್ ಶಾಕ್, ಬೇರೆ ಬೇರೆಯಾಯ್ತು ರುಂಡ, ಮುಂಡ
BELLARY : ಖಾಸಗಿ ಲೈನ್ಮ್ಯಾನ್ (Lineman) ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಕಂಬವೇರಿದ್ದ ವೇಳೆ ಕರೆಂಟ್ ಪಾಸ್ ಆಗಿ ಭೀಕರ ಅನಾಹುತವೊಂದು ಸಂಭವಿಸಿದೆ. ವಿದ್ಯುತ್ ಶಾಕ್ ತಗುಲಿದ ರಭಸಕ್ಕೆ ವ್ಯಕ್ತಿಯ ರುಂಡ ನೆಲಕ್ಕುರುಳಿದ್ದು, ಮುಂಡ ವಿದ್ಯುತ್ ಕಂಬದ ಮೇಲೆ ನೇತಾಡುತ್ತಿದ್ದ ದೃಶ್ಯವೊಂದು ಬಳ್ಳಾರಿಯ ಕುರುಗೋಡು (Kurugodu) ತಾಲೂಕಿನ ದಮ್ಮೂರು ಗ್ರಾಮದ ಹೊಲದಲ್ಲಿ ಕಂಡುಬಂದಿದೆ. ಭದ್ರ ಎಂಬಾತನೇ ಮೃತಪಟ್ಟ ಯುವಕ. ವಿದ್ಯುತ್ ಇಲ್ಲವೆಂದು ಭಾವಿಸಿ ಕಂಬ ಏರಿ ವಿದ್ಯುತ್ ತಂತಿ ಜೋಡಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಮಾರಸ್ವಾಮಿ ಆರೋಗ್ಯದ ಕುರಿತು ನಿಖಿಲ್ ಟ್ವೀಟ್
BENGALURU : ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಬೆಂಗಳೂರಿನ ಜಯನಗರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ಹೆಚ್ಡಿಕೆ ಅರೋಗ್ಯದ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯವರು ಈಗ ಚೇತರಿಸಿಕೊಂಡಿದ್ದಾರೆ. ಶೀಘ್ರವೇ ಅವರು ಮನೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಮುಖಂಡ ಅನುಮಾನಾಸ್ಪದ ಸಾವು
BENGALURU : ಜೆಡಿಎಸ್ ಮುಖಂಡರೊಬ್ಬರು (JDS Leader) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ನಾಗರಭಾವಿಯಲ್ಲಿ ನಡೆದಿದೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ಮಲ್ಲಸಂದ್ರ ವಾರ್ಡ್ ಜೆಡಿಎಸ್ ಪ್ರಭಾವಿ ಮುಖಂಡ, ಹಾಗೂ ಉದ್ಯಮಿ ಮಾರಾಂಜಿನಪ್ಪ(62) ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 3 ಗಂಟೆಗೆ ಸುಮಾರಿಗೆ ಎರಡನೇ ಪತ್ನಿ ಮನೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಕಟ್ಟಡದಿಂದ ಬಿದ್ದ ಉದ್ಯಮಿಯನ್ನ ಎರಡನೇ ಪತ್ನಿ ತಕ್ಷಣ ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ. ಮಾರಾಂಜಿನಪ್ಪ ಸಾವಿನ ಬಗ್ಗೆ ಎರಡನೇ ಪತ್ನಿ ಮೇಲೆ ಮೊದಲ ಪತ್ನಿ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದು, ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆಗಾಗಿ ಮಕ್ಕಳಿಗೆ ಮದುವೆ
CHIKKABALLAPURA : ಮಳೆಗಾಗಿ ಪುಟ್ಟ ಮಕ್ಕಳಿಗೆ ಮದುವೆ (Marriage) ಮಾಡಿಸಿದ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮಗಳಕೊಪ್ಪೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಇಬ್ಬರು ಬಾಲಕರಲ್ಲಿ ಒಬ್ಬ ವರನಾದ್ರೆ, ಇನ್ನೊಬ್ಬ ಬಾಲಕನಿಗೆ ವಧುವಿನ ಪೋಷಾಕು ಹಾಕಿ ಶಾಸ್ತ್ರೋಕ್ತವಾಗಿ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ. ಈ ಮೂಲಕ ಗ್ರಾಮಸ್ಥರು ವರುಣನಿಗಾಗಿ ಮೊರೆಯಿಟ್ಟಿದ್ದಾರೆ.