SHIVAMOGGA LIVE NEWS | 11 APRIL 2023
SHIMOGA : ವನ್ಯಜೀವಿ ವಿಭಾಗದ ವೈದ್ಯ (Doctor) ಡಾ.ವಿನಯ್ ಅವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಆಪರೇಷನ್ ಕಾಡಾನೆ ವೇಳೆ ಚನ್ನಗಿರಿಯ ಜೇನಹಳ್ಳಿ ಬಳಿ ಘಟನೆ ಸಂಭವಿಸಿದೆ.
ಚನ್ನಗಿರಿ ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಬಾಲಕಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನಲೆ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯ (Doctor) ಡಾ.ವಿನಯ್ ಅವರ ಮೇಲೆ ದಾಳಿ ನಡೆಸಿದೆ.
ದಾಳಿಯಾಗಿದ್ದು ಹೇಗೆ?
ಶೋಧ ಕಾರ್ಯದ ವೇಳೆ ಆನೆ ಪತ್ತೆಯಾಗಿತ್ತು. ಕೂಡಲೆ ಅರವಳಿಕೆ ಚುಚ್ಚುಮದ್ದನ್ನು ಆನೆಗೆ ಫೈರ್ ಮಾಡಲಾಗಿತ್ತು. ಅನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕೆಳಗೆ ಬಿದ್ದಿದೆ. ಆ ಬಳಿಕ ಅಧಿಕಾರಿಗಳು ಕಾಡಾನೆ ಸಮೀಪಕ್ಕೆ ಹೋಗಿದ್ದಾರೆ. ಈ ವೇಳೆ ದಿಢೀರ್ ಎಚ್ಚರಗೊಂಡ ಆನೆ, ಅರಣ್ಯಾಧಿಕಾರಿಗಳ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಓಡಲು ಮುಂದಾಗಿದ್ದ ಡಾ.ವಿನಯ್ ಅವರು ಎಡವಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆಗ ಆನೆ ದಾಳಿ ನಡೆಸಿದ್ದು, ಡಾ.ವಿನಯ್ ಅವರು ಗಂಭೀರ ಗಾಯಗೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಾಡಹಗಲೆ ಗನ್ ತೋರಿಸಿ ಬೆದರಿಸದ್ದವನು ಅರೆಸ್ಟ್, ಆತನ ಬಳಿ ಏನೇನೆಲ್ಲ ಸಿಕ್ತು?
ಡಾ. ವಿನಯ್ ಅವರನ್ನು ಕೂಡಲೆ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾರು ಈ ಡಾ. ವಿನಯ್?
ಡಾ. ವಿನಯ್ ಅವರು ಶಿವಮೊಗ್ಗ ವನ್ಯಜೀವಿ ವಿಭಾಗದ ನುರಿತ ವೈದ್ಯರು. ರಾಜ್ಯದ ವಿವಿಧೆಡೆ ಆನೆ ಹಿಡಿಯುವ ಮತ್ತು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಕ್ರೆಬೈಲು ಬಿಡಾರದಲ್ಲಿರುವ ಆನೆಗಳಿಗೂ ಇವರೆ ವೈದ್ಯರು. ವಿವಿಧೆಡೆ ಇತರೆ ವನ್ಯಜೀವಿಗಳ ಕಾರ್ಯಾಚರಣೆಯಲ್ಲಿಯು ಡಾ.ವಿನಯ್ ಭಾಗವಹಿಸಿದ್ದರು.