ಶಿವಮೊಗ್ಗ ಲೈವ್.ಕಾಂ | SHIKARIPURA NEWS | 10 ಡಿಸೆಂಬರ್ 2021
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 15 ಸ್ಥಾನ ಗೆಲ್ಲಲಿದೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಬಿಜೆಪಿ ಪರವಾದ ಅಲೆ ಇದೆ ಅನ್ನುವುದು ಸ್ಪಷ್ಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶಿಕಾರಿಪುರ ಪುರಸಭೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳಿಗೆ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದರು.
ಯಡಿಯೂರಪ್ಪ ಪ್ರತಿಕ್ರಿಯೆಯ ಪ್ರಮುಖಾಂಶಗಳು
‘ನಾನು ಈಗಾಗಲೆ ಹೇಳಿದ್ದೇನೆ ಕನಿಷ್ಠ 15 ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ.’
‘ಶಿವಮೊಗ್ಗದಲ್ಲಿ ಡಿ.ಎಸ್.ಅರುಣ್ ಅವರು ಮುನ್ನೂರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸುತ್ತಾರೆ. ಎಲ್ಲೆಡೆ ಮೊದಲ ಸುತ್ತಿನಲ್ಲೆ ಗೆಲ್ಲಬೇಕು ಎಂದು ಪ್ರಯತ್ನಿಸುತ್ತಿದ್ದೇವೆ.’
‘ನಮ್ಮಲ್ಲೆ ಮಂತ್ರಿಗಳು, ಶಾಸಕರು ಗೆಲುವಿಗಾಗಿ ಶ್ರಮಿಸಿದ್ದಾರೆ. ಕನಿಷ್ಠ 15 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ವಿಧಾನ ಪರಿಷತ್’ನಲ್ಲೂ ಬಿಜೆಪಿಗೆ ಬಹುಮತ ಸಿಗಲಿದೆ.’
‘ವಿರೋಧ ಪಕ್ಷದ ನಾಯಕರಿಗೆ ಪ್ರತಿಕ್ರಿಯೆ ನೀಡಿಲ್ಲ. ಮುಂದೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಫಲಿತಾಂಶವೇ ಅವರಿಗೆ ಉತ್ತರವಾಗಲಿದೆ.’
‘ಇದು ಸ್ಥಳೀಯ ಸಂಸ್ಥೆಗಳಿಂದ ಆಗುವ ಚುನಾವಣೆ. ಇಲ್ಲಿ ನಾವು 15 ಸ್ಥಾನ ಗೆಲ್ಲುತ್ತೇವೆ. ಅದರ ಅರ್ಥ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಬಿಜೆಪಿ ಪರವಾದ ಅಲೆ ಇದೆ ಅನ್ನುವುದು ಸ್ಪಷ್ಟವಾಗುತ್ತೆ. ಆದ್ದರಿಂದ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯಲು ಈ ಚುನಾವಣೆ ನಾಂದಿ ಹಾಡಲಿದೆ.’
ಇನ್ನು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುಖ್ಯಮಂತ್ರಿಗಳು ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು. ವಿಜಯೇಂದ್ರ ಅವರಿಗೆ ಹೆಚ್ಚಿನ ಸ್ಥಾನಮಾನದ ಕುರಿತು ಚರ್ಚೆಗಳಿಗೆ ‘ಅದರ ವಿಜಯೇಂದ್ರ ಅವರೇನು ಅಪೇಕ್ಷೆ ಪಟ್ಟಿಲ್ಲ’ ಎಂದು ತಿಳಿಸಿದರು.