ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 21 ಡಿಸೆಂಬರ್ 2019
ದೇಶದ ಯುವಜನರ ಹಾಗೂ ಬಿಜೆಪಿ ವಿರುದ್ಧ ಧ್ವನಿ ಎತ್ತುವವರ ಹತ್ತಿಕ್ಕುವ ಕೆಲಸ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಆರೋಪಿಸಿದರು.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಆದಿಚುಂಚನಗಿರಿ ಕಲ್ಯಾಣಮಂದಿರದಲ್ಲಿ ಜಿಲ್ಲಾ ಎನ್ಎಸ್ಯುಐನಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶ್ರೀನಿವಾಸ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುವ ಕೆಲಸವೂ ಬಿಜೆಪಿಯಿಂದ ನಡೆಯುತ್ತಿದೆ. ಹೊಸ ಹೊಸ ಕಾಯ್ದೆ ಕಾನೂನು ರೂಪಿಸುವ ಮುಖಾಂತರ ದೇಶದ ಜನರಿಗೆ ಸಮಸ್ಯೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಬಗ್ಗೆ ಪ್ರಶ್ನಿಸಿದರೆ ದೇಶಭಕ್ತಿಯ ಹೆಸರಲ್ಲಿ ದೂಷಿಸುವ ಕೆಲಸ ಮಾಡುತ್ತಾರೆ. ೭೦ ವರ್ಷಗಳಿಂದ ದೇಶದ ಅಭಿವೃದ್ಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ಗೆ ಬಿಜೆಪಿಯ ದೇಶಭಕ್ತಿಯ ಪ್ರಮಾಣಪತ್ರ ಬೇಕಿಲ್ಲ. ದೇಶದ ಪ್ರಗತಿ ದೃಷ್ಠಿಯಿಂದ ಕೆಲಸ ಮಾಡುವ ದೇಶಭಕ್ತಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ಅಡಗಿದೆ ಎಂದರು.
ನೆಹರು, ಗಾಂಧಿ, ಅಂಬೇಡ್ಕರ್ ವಿರುದ್ಧ ಅಪಪ್ರಚಾರ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನೆಹರು, ಗಾಂಧಿ, ಅಂಬೇಡ್ಕರ್ ವಿರುದ್ಧ ಅಪಪ್ರಚಾರ ನಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅಂತಹ ತಪ್ಪು ಸಂಗತಿಗಳ ಬಗ್ಗೆ ಹಾಗೂ ಅದರ ನಿಜ ವಿಷಯಗಳ ಬಗ್ಗೆ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಎನ್ಎಸ್ಯುಐ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಜಿ.ಮಧುಸೂದನ್, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಬಾಲಾಜಿ, ಎಂಎಲ್ಸಿ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಕಾಶಿ, ಭದ್ರಾವತಿ ಯುವ ಮುಖಂಡ ಗಣೇಶ್, ಶ್ರೀನಿವಾಸ್ ಕರಿಯಣ್ಣ, ಕಲಗೋಡು ರತ್ನಾಕರ್, ಯಮುನಾ ರಂಗೇಗೌಡ, ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Youth Congress National President Shrinivas visits Shimoga and participated in NSUI Programme.
ಶಿವಮೊಗ್ಗ ಲೈವ್.ಕಾಂ