SHIVAMOGGA LIVE NEWS | 20 FEBRUARY 2024
SHIMOGA : ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಘೋಷಣೆಯನ್ನು ಬದಲಿಸಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ ಎಂಬ ಘೋಷಣೆ ಪ್ರಕಟಿಸಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಶಿವಮೊಗ್ಗ ನಗರ ಯುವ ಮೋರ್ಚಾದ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯವನ್ನು ತೆಗೆದು ಹಾಕಿರುವ ಸರ್ಕಾರ ಅವರಿಗೆ ಅಪಮಾನ ಮಾಡಲಾಗುತ್ತಿದೆ. ಈ ಹಿನ್ನೆಲೆ ಸಚಿವ ಮಹದೇವಪ್ಪ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು ಯುವ ಮೋರ್ಚಾ ಆಗ್ರಹಿಸಿದೆ.
ಯಾರೆಲ್ಲ ಏನೇನು ಹೇಳಿದರು?
ಚನ್ನಬಸಪ್ಪ, ಶಿವಮೊಗ್ಗ ಶಾಸಕ : ಸಂಸ್ಕಾರದ ಭಾಗಗಳನ್ನು ಕಿತ್ತೆಸೆಯುವುದು ಕಾಂಗ್ರೆಸ್ ಸರ್ಕಾರದ ಮನಸ್ಥಿತಿ. 1928ರಲ್ಲಿ ಕುವೆಂಪು ಅವರು ಸೋಮನಾಥ ದೇಗುಲಕ್ಕೆ ಹೋದಾಗ ಭಾವುಕರಾಗಿ ಬರೆದ ಗೀತೆಯ ಸಾಲು ಇದು. ಆ ಗೀತೆಯಿಂದ ಪ್ರೇರಣೆ ಪಡೆಯಬೇಕು ಹೊರತು ತಿರುಚುವ ಪ್ರಯತ್ನ ಮಾಡಬಾರದು. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಹೊಲಸು ಮಾಡುತ್ತಿದೆ. ಸಂವಿಧಾನದಲ್ಲಿ ಪ್ರಶ್ನಿಸುವ ಹಕ್ಕಿದೆ ಎಂದು ಸರ್ಕಾರ ಹೇಳಿದೆ. ಆದರೆ ಎಲ್ಲಿ ಏನು ಮಾಡಬೇಕು ಅಂತಾ ಸಂವಿಧಾನ ಹೇಳಿದೆ. ಇದರ ಹೊರತು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು.
ಸಿದ್ರಾಮಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ : ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ. ಯಾರನ್ನು ಪ್ರಶ್ನಸುವುದು. ಪಾಠ ಅರ್ಥವಾಗದೆ ಇದ್ದರೆ ಪ್ರಶ್ನಿಸಬೇಕು. ಇದರ ಹೊರತು ಇನ್ನೇನನ್ನು ಪ್ರಶ್ನಿಸಬೇಕಿದೆ. ಅವೈಜ್ಞಾನಿಕವಾದ ನಿರ್ಧಾರವನ್ನು ಕೈ ಬಿಡಬೇಕು.
ಯುವ ಮೋರ್ಚಾ ನಗರ ಅಧ್ಯಕ್ಷ ರಾಹುಲ್ ಪಿ.ಬಿದರೆ, ಪ್ರಧಾನ ಕಾರ್ಯದರ್ಶಿ ಯುವರಾಜ್, ಅಭಿಷೇಕ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – SSLC, PUC ಪರೀಕ್ಷೆ ವೇಳಾಪಟ್ಟಿ ಪ್ರಕಟ, ಯಾವ ಪರೀಕ್ಷೆ, ಯಾವಾಗ ನಡೆಯುತ್ತೆ?