SHIVAMOGGA LIVE NEWS | 28 NOVEMBER 2023
SHIMOGA : ಗ್ಯಾರಂಟಿಗಳ ನಡುವೆಯೂ ರಾಜ್ಯ ಸರ್ಕಾರ ಉತ್ತಮವಾಗಿ ಬರ ನಿರ್ವಹಣೆ ಮಾಡುತ್ತಿದೆ. ಜತೆಗೆ ಬರ ಪರಿಹಾರಕ್ಕೆ ಹಣದ ಕೊರತೆಯೂ ಎದುರಾಗಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ಖಾತೆಗೆ ಬರ ನಿರ್ವಹಣೆಗೆ ಸಾಕಾಗುವಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.
238 ಸಮಸ್ಯಾತ್ಮಕ ಗ್ರಾಮಗಳು ಗುರುತು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ(Madhu Bangarappa), ಶಿವಮೊಗ್ಗ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವು ಮತ್ತು ವಿದ್ಯುತ್ ಪೂರೈಕೆಗೆ ತಾತ್ಕಾಲಿಕವಾಗಿ ಯಾವುದೇ ಸಮಸ್ಯೆಗಳಿಲ್ಲ. ಮುಂಗಾರು ಕೊರತೆ ಕಾರಣದಿಂದ ಡಿಸೆಂಬರ್ ನಂತರ ಒಂದೊಂದೇ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿದೆ. ಈಗಾಗಲೇ 238 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಸದ್ಯ ಆನವಟ್ಟಿ ಮತ್ತು ಸೊರಬದ ತಲಾ ಒಂದು ವಾರ್ಡ್ಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ- KSRTC ವತಿಯಿಂದ 20 ಲಾರಿ ಖರೀದಿ, ಇನ್ಮುಂದೆ ‘ನಮ್ಮ ಕಾರ್ಗೊ’ಗೆ ಮತ್ತಷ್ಟು ಬಲ
6.42 ಲಕ್ಷ ಮೆಟ್ರಿಕ್ ಟನ್ ಮೇವು
ನೀರು, ವಿದ್ಯುತ್ ಮತ್ತು ಮೇವು ಕೊರತೆ ಸಂಬಂಧ ನ.15ರೊಳಗೆ ವರದಿ ತರಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗು ಸೂಚಿಸಿದ್ದರು. ಈಗಾಗಲೇ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ವಾರಕ್ಕೆ 27 ಸಾವಿರ ಟನ್ ಮೇವಿನಂತೆ ಒಟ್ಟಾರೆ 6.42 ಲಕ್ಷ ಮೆಟ್ರಿಕ್ ಟನ್ ಮೇವು ಲಭ್ಯವಿದ್ದು ಮುಂದಿನ ಅವಧಿಗೆ ಸಾಕಾಗಲಿದೆ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಮಾಜಿ ಎಂಎಲ್ಸಿ ಆರ್.ಪ್ರಸನ್ನಕುಮಾರ್, ಮುಖಂಡರಾದ ಹೆಚ್.ಸಿ.ಯೋಗೇಶ್, ಎಸ್. ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಚಂದ್ರಭೂಪಾಲ್ ಇತರರಿದ್ದರು.