ಶಿವಮೊಗ್ಗದ ಗ್ರಾಮಗಳೆ ಕರೋನ ಹಾಟ್ ಸ್ಪಾಟ್, ಶೇ.54ರಷ್ಟು ಸೋಂಕಿತರು ಹಳ್ಳಿ ವಾಸಿಗಳು, ಇಲ್ಲಿದೆ ತಾಲೂಕುವಾರು ಡಿಟೇಲ್ಸ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 MAY 2021 ಸುದ್ದಿಯ ಮುಂದಿನ 14 ಪ್ಯಾರಾಗಳು ಕೆಳಗಿವೆ.

ಎರಡನೆ ಅಲೆ ಕರೋನ ಸೋಂಕು ಹರಡುವ ಪ್ರಮಾಣ ನಿಧಾನವಾಗಿ ತಗ್ಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಶೇ.40ರಿಂದ ಶೇ.30ಕ್ಕೆ ಇಳಿಕೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಆತಂಕ ಮೂಡಿಸಿದೆ. ಇದೆ ಕಾರಣಕ್ಕೆ ಹಲವು ಊರುಗಳು ಲಾಕ್ ಡೌನ್ ಆಗಿವೆ. ಕೆಲವು ಕಡೆ ಸೀಲ್ ಡೌನ್ ಕೂಡ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೆ ಅಲೆ ಕರೋನ ವ್ಯಾಪಕವಾಗಿ ಹರಡಿದೆ. ಏಪ್ರಿಲ್ 1 ರಿಂದ ಈತನಕ 20,591 ಮಂದಿ ಕರೋನ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 11,270 ಮಂದಿ ಗ್ರಾಮೀಣ ಭಾಗದವರಾಗಿದ್ದಾರೆ. ಹಳ್ಳಿ ವ್ಯಾಪ್ತಿಯಲ್ಲಿ ಕರೋನ ವೇಗವಾಗಿ ಹರಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಶಿವಮೊಗ್ಗ ತಾಲೂಕಿನಲ್ಲಿ ಈತನಕ 5651 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಈ ಪೈಕಿ 1430 ಸೋಂಕಿತರು ಗ್ರಾಮೀಣ ಭಾಗದವರು. ಭದ್ರಾವತಿಯಲ್ಲಿ 3307 ಮಂದಿಗೆ ಸೋಂಕು ತಗುಲಿದ್ದು, 1124 ಮಂದಿ ಗ್ರಾಮೀಣ ಭಾಗದವರು.

ಹೊಸನಗರದಲ್ಲಿ 1636 ಸೋಂಕು ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 1522 ಮಂದಿ ಹಳ್ಳಿಗಳಿಗೆ ಸಂಬಂಧಿಸಿದವರು. ಸಾಗರದಲ್ಲಿ 3795 ಮಂದಿಗೆ ಕರೋನ ಸೋಂಕು ಬಂದಿದೆ. 2222 ಮಂದಿ ಗ್ರಾಮೀಣ ಭಾಗದವರು ಸೋಂಕಿಗೆ ತುತ್ತಾಗಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗ ತಾಲೂಕಿನ ಯಾವ್ಯಾವ ಹಳ್ಳಿಯಲ್ಲಿ ಎಷ್ಟೆಷ್ಟಿದೆ ಕರೋನ ಕೇಸ್? ಇಲ್ಲಿದೆ ಡಿಟೇಲ್ಸ್

ಶಿಕಾರಿಪುರದಲ್ಲಿ 2166 ಮಂದಿಗೆ ಕರೋನ ಬಂದಿದೆ. ಅದರಲ್ಲಿ 1527 ಗ್ರಾಮಸ್ಥರು ಸೋಂಕಿತರಾಗಿದ್ದಾರೆ. ಸೊರಬದಲ್ಲಿ 1914 ಸೋಂಕಿತರ ಪೈಕಿ 1674 ಮಂದಿ ಗ್ರಾಮೀಣ ಪ್ರದೇಶದವರು. ಇನ್ನು, ತೀರ್ಥಹಳ್ಳಿಯಲ್ಲಿ 2122 ಮಂದಿಗೆ ಕರೋನ ಸೋಂಕು ತಗುಲಿದೆ. ಅದರಲ್ಲಿ 1771 ಮಂದಿ ಗ್ರಾಮಾಂತರದವರು.

ಇದನ್ನೂ ಓದಿ | ತೀರ್ಥಹಳ್ಳಿ ತಾಲೂಕಿನ ಯಾವ್ಯಾವ ಹಳ್ಳಿಯಲ್ಲಿ ಎಷ್ಟೆಷ್ಟಿದೆ ಕರೋನ ಕೇಸ್? ಇಲ್ಲಿದೆ ಗ್ರಾಮ ಪಂಚಾಯಿತಿವಾರು ಡಿಟೇಲ್ಸ್

ಹಳ್ಳಿ ಹಳ್ಳಿಗಳೇ ಸೀಲ್ ಡೌನ್

ಮೊದಲ ಅಲೆಗೆ ಹೋಲಿಸಿದರೆ ಎರಡನೆ ಅಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳೆ ಪ್ರಮುಖ ಟಾರ್ಗೆಟ್ ಆಗಿದೆ. ಇದೆ ಕಾರಣಕ್ಕೆ ಅತಿ ಹೆಚ್ಚು ಸೋಂಕಿತರು ಇರುವ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಕೆಲವು ಕಡೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ನಾರಾಯಣಪುರ, ಆನಂದಪುರ, ರಿಪ್ಪನ್‍ ಪೇಟೆ, ಕೋಣಂದೂರು, ಆನವಟ್ಟಿ ಸೇರಿದಂತೆ ಹಲವು ಕಡೆ ಗ್ರಾಮಗಳು ಲಾಕ್ ಡೌನ್ ಆಗಿವೆ.

ಇದನ್ನೂ ಓದಿ | ಭದ್ರಾವತಿ ತಾಲೂಕಿನ ಯಾವ್ಯಾವ ಹಳ್ಳಿಯಲ್ಲಿ ಎಷ್ಟೆಷ್ಟಿದೆ ಕರೋನ ಕೇಸ್? ಇಲ್ಲಿದೆ ಗ್ರಾಮ ಪಂಚಾಯಿತಿವಾರು ಡಿಟೇಲ್ಸ್

230521 Konandur Lockdown for One Week 1 1

ಗ್ರಾಮೀಣ ಭಾಗದಲ್ಲಿ ಕೇರ್ ಸೆಂಟರ್‍

ಮೊದಲ ಅಲೆಯಲ್ಲಿ ಇದ್ದಂತೆ ಈ ಭಾರಿಯೂ ಸೋಂಕು ನಗರ ಪ್ರದೇಶಗಳಿಗೆ ಸೀಮಿತ ಎಂದು ಜಿಲ್ಲಾಡಳಿತ ಅಂದಾಜಿಸಿತ್ತು. ಇದೆ ಕಾರಣಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಮತ್ತು ಆರೈಕೆಗಾಗಿ ಕೋವಿಡ್‍ ಕೇರ್ ಸೆಂಟರ್‍ಗಳನ್ನು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿತ್ತು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳ ಲೆಕ್ಕಾಚಾರ ಉಲ್ಟಾ ಮಾಡಿದ ಸೋಂಕು ಹಳ್ಳಿ ಹಳ್ಳಿ ತಲುಪಿದೆ. ಈಗ ಎಚ್ಚೆತ್ತಿರುವ ಆಡಳಿತ ಗ್ರಾಮೀಣ ಭಾಗದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಲು ಸೂಚಿಸಿದೆ.

ಇದನ್ನೂ ಓದಿ | ಹೊಸನಗರದಲ್ಲೂ ಹಳ್ಳಿ ಹಳ್ಳಿಗೆ ವ್ಯಾಪಿಸಿದ ಕರೋನ, ಯಾವ್ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟೆಷ್ಟಿದೆ ಪ್ರಕರಣ?

‘ಅಗತ್ಯಬಿದ್ದರೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೋವಿಡ್ ಕೇರ್ ಸೆಂಟರ್‍ಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ, ಪಿಡಿಓಗಳಿಗೆ ಸೂಚಿಸಿದ್ದೇನೆ. ಕೆಲವು ಕಡೆ ಎರಡ್ಮೂರು ಗ್ರಾಮ ಪಂಚಾಯಿತಿಯವರು ಸೇರಿ ಕೋವಿಡ್ ಕೇರ್ ಸೆಂಟರ್‍ ಮಾಡುತ್ತೇವೆ ಅಂದಿದ್ದಾರೆ. ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ’ ಅನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ.

ಇದನ್ನೂ ಓದಿ | ಸೊರಬ ತಾಲೂಕಿನಲ್ಲಿ ಕರೋನ ಪಾಸಿಟಿವ್, ಯಾವ್ಯಾವ ಹಳ್ಳಿಯಲ್ಲಿ ಎಷ್ಟೆಷ್ಟಿದೆ ಕೇಸ್? ಇಲ್ಲಿದೆ ಡಿಟೇಲ್ಸ್

ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಿಎಂ

ಹಳ್ಳಿಗಳೆ ಕರೋನ ಹಾಟ್‍ ಸ್ಪಾಟ್ ಆಗುತ್ತಿರುವ ಬೆನ್ನಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತವರು ಜಿಲ್ಲೆಯ ಸಚಿವರು, ಅಧಿಕಾರಿಗಳು, ಆಯ್ದ ಹತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಓಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಗ್ರಾಮೀಣ ಪ್ರದೇಶದಲ್ಲಿ ಕರೋನ ಕಟ್ಟಿಹಾಕಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.

ಇದನ್ನೂ ಓದಿ | ಶಿಕಾರಿಪುರದ ಗ್ರಾಮೀಣ ಭಾಗದಲ್ಲೂ ಕರೋನ ಅಬ್ಬರ, ಯವ್ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟೆಷ್ಟಿದೆ ಪ್ರಕರಣ?

ಮಳೆಗಾಲ ಆರಂಭವಾಗುತ್ತಿದ್ದು ಮಲೆನಾಡು ಭಾಗದಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯಲಿದೆ. ಈ ಹೊತ್ತಿಗೆ ಸೋಂಕು ಅಬ್ಬರಿಸಿದರೆ ಕೃಷಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಇದೆ.

ಇದನ್ನೂ ಓದಿ | ಸಾಗರದಲ್ಲೂ ಕರೋನ ಅಬ್ಬರ, ಯಾವ್ಯಾವ ಹಳ್ಳಿಯಲ್ಲಿ ಎಷ್ಟೆಷ್ಟಿದೆ ಪಾಸಿಟಿವ್ ಪ್ರಕರಣ? ಇಲ್ಲಿದೆ ಡಿಟೇಲ್ಸ್

ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment