ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 29 ನವೆಂಬರ್ 2021
ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಅನುದಾನವಿಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೆ ಕೆಲಸಗಳನ್ನು ಮಾಡಲಾಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.
ತೀರ್ಥಹಳ್ಳಿ ತಾಲೂಕು ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿಯ ಏಳು ಸದಸ್ಯರು ಈ ಭಾರಿ ವಿಧಾನ ಪರಿಷತ್ ಚುನಾವಣೆಗೆ ಮತ ಹಾಕದಿರಲು ನಿರ್ಧರಿಸಿದ್ದಾರೆ.
ಒಂದೂವರೆ ಕೋಟಿಗೂ ಹೆಚ್ಚು ಬಾಕಿ
ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಮರಳು ಕ್ವಾರಿಗಳಿವೆ. ಇವುಗಳಿಂದ ಸರ್ಕಾರಕ್ಕೆ ಕೊಟ್ಯಂತರ ರೂ. ಲಾಭವಾಗುತ್ತಿದೆ. ಮೂರು ಕ್ವಾರಿಗಳಿಂದ ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ 84 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕು. ಆದರೆ ಕಳೆದ ಎರಡು ವರ್ಷದಿಂದ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ 1.68 ಕೋಟಿ ರೂ. ಅನುದಾನ ಬಾಕಿ ಉಳಿದುಕೊಂಡಿದೆ. ‘ಹಣವಿಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಗುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ರಸ್ತೆಗಳು ಹಾಳಾಗಿವೆ, ಜನರು ಪ್ರಶ್ನಿಸುತ್ತಿದ್ದಾರೆ
ಮರಳು ಕ್ವಾರಿಗಳಿಗೆ ಓಡಾಡುವ ಲಾರಿಗಳಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಹಾಳಾಗಿವೆ. ಅವುಗಳ ರಿಪೇರಿಗೆ ಗ್ರಾಮ ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದೆ. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಕ ಸೌಕರ್ಯಗಳ ಅಭಿವೃದ್ಧಿಗೂ ಅನುದಾನದ ಅಗತ್ಯವಿದೆ. ಆದರೆ ಎರಡು ವರ್ಷದಿಂದ 1.68 ಕೋಟಿ ರೂ. ಬಾಕಿ ಉಳಿದುಕೊಂಡಿರುವುದರಿಂದ, ಅಭಿವೃದ್ದಿ ಮಾಡಲು ಆಗುತ್ತಿಲ್ಲ. ಅಭಿವೃದ್ದಿ ಆಗದಿರುವ ಕುರಿತು ಜನರು ಗ್ರಾಮ ಪಂಚಾಯಿತಿ ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ.
‘ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ತಿಳಿಸಿ, ಮನವಿ ಕೊಟ್ಟಿದ್ದೇವೆ. ಅಧಿಕಾರಿಗಳಿಗೂ ತಿಳಿಸಿದ್ದೇವೆ. ಅದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಬಹಿಷ್ಕಾರದ ನಿರ್ಧಾರ
ಅನುದಾನ ಬಿಡುಗಡೆ ಮಾಡದಿರುವುದರಿಂದ ಬೇಸರಗೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಏಳು ಸದಸ್ಯರು ಮತ ಹಾಕದಿರಲು ತೀರ್ಮಾನಿಸಿದ್ದಾರೆ.
ನಾಲೂರು ಕೊಳಿಗೆ ವ್ಯಾಪ್ತಿಯ ಬಗ್ಗೋಡಿಗೆ ಗ್ರಾಮದ ಸದಸ್ಯೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ, ಕೊಳಿಗೆ ಗ್ರಾಮದ ಪ್ರತಿನಿಧಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ, ದಾಸನ ಕೊಡಿಗೆ ಸದಸ್ಯೆ ಸುಧಾ, ಹುರುಳಿ ಸದಸ್ಯ ಬಿ.ಜಿ.ಸಂದೀಪ್, ಕೊಳಿಗೆ ಮೋಹನ್, ಕೊಳಿಗೆ ಸದಸ್ಯೆ ಅನಿತಾ, ಶಿವಳ್ಳಿಯ ಸದಸ್ಯೆ ಟಿ.ಆರ್ ದ್ವಿಜರಾಜ್ ಅವರು ಮತದಾನ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ.
ವಾಹನ ಸಂಚಾರಕ್ಕೆ ಯೋಗ್ಯವಿಲ್ಲದ ರಸ್ತೆ
ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು ಸಂಪೂರ್ಣ ಹದೆಗೆಟ್ಟು ಹೋಗಿವೆ. ಇವುಗಳ ರಿಪೇರಿ ಮತ್ತು ಡಾಂಬರೀಕರಣಕ್ಕೆ ಲಕ್ಷಾಂತರ ರೂ. ಅನುದಾನ ಅಗತ್ಯವಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯದ್ದರಿಂದ ಪಂಚಾಯಿತಿ ವತಿಯಿಂದಲೇ ರಿಪೇರಿ ಮಾಡಿಸಬೇಕಿದೆ. ಆದರೆ ಅನುದಾನವಿಲ್ಲದೆ ರಿಪೇರಿ ಕಾರ್ಯ ಅಸಾಧ್ಯವಾಗಿದೆ.
ವಿಧಾನ ಪರಿಷತ್ ಚುನಾವಣೆ ಸಂದರ್ಭ ಮತದಾನ ಬಹಿಷ್ಕಾರ ಮಾಡಿದರೆ ಸರ್ಕಾರದ ಗಮನ ಸೆಳೆಯಬಹುದು ಎಂಬ ಉದ್ದೇಶದಿಂದ ಸದಸ್ಯರು ಈ ನಿರ್ಧಾರ ಕೈಗೊಂಡಿದ್ದಾರೆ. ಇನ್ನು, ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಧಾರ, ಅನುದಾನ ಕೊರತೆ ಎದುರಿಸುತ್ತಿರುವ ಉಳಿದ ಗ್ರಾಮ ಪಂಚಾಯಿತಿ ಸದಸ್ಯರನ್ನು ಸೆಳೆದಿದೆ.