ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022
ಶಿವಮೊಗ್ಗ ಜಿಲ್ಲೆಯಾದ್ಯಂತ ಅಪಘಾತಗಳ ಪ್ರಮಾಣ ಕಡಿತಗೊಳಿಸಲು ಪೊಲೀಸ್ ಇಲಾಖೆ ವಿನೂತನ ಪ್ರಯೋಗ ಆರಂಭಿಸಿದೆ. ಹೆಚ್ಚು ಅಪಘಾತ ಸಂಭವಿಸುವ ವಲಯಗಳ ಚಾರ್ಟ್ ಸಿದ್ಧಪಡಿಸಲಾಗಿದೆ.
ಪ್ರೆಸ್ ಟ್ರಸ್ಟ್’ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಅಪಘಾತ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಕ್ಷಣಾಧಿಕಾರಿ ಹೇಳಿದ್ದೇನು?
♦ ‘ಕಳೆದ ಸಾಲಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ.20ರಷ್ಟು ಅಪಘಾತ ಪ್ರಕರಣಗಳು ಕಡಿಮೆಯಾಗಿವೆ. ಅಪಘಾತ ಪ್ರಮಾಣ ಇನ್ನಷ್ಟು ತಗ್ಗಬೇಕಿದೆ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.’
♦ ‘ಒಂದು ಅಪಘಾತ ಹಲವು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಪ್ರತ್ಯಕ್ಷ, ಪರೋಕ್ಷವಾಗಿ ಸುಮಾರು 30 ಜನಕ್ಕೆ ತೊಂದರೆ ಉಂಟಾಗುತ್ತದೆ.’
♦ ‘ಜಿಲ್ಲೆಯಾದ್ಯಂತ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ವಲಯಗಳನ್ನು ಗುರುತಿಸಲಾಗುತ್ತಿದೆ. ಯಾವೆಲ್ಲ ಜಾಗದಲ್ಲಿ ನಿರಂತರ ಅಪಘಾತ ಸಂಭವಿಸುತ್ತಿವೆ ಅನ್ನುವ ಚಾರ್ಟ್ ಸಿದ್ಧಪಡಿಸಲಾಗುತ್ತಿದೆ.’
♦ ‘ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಗುತ್ತಿಗೆದಾರರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರಮುಖರ ಜೊತೆ ಸಭೆ ನಡೆಸಲಾಗುತ್ತದೆ. ಅಪಘಾತ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಇವುಗಳಿಂದ ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ತಗ್ಗಲಿದೆ.’