SHIVAMOGGA LIVE NEWS | 1 DECEMBER 2022
ಸಾಗರ : ಪಟ್ಟಣದಲ್ಲಿ ನೀರು ಸರಬರಾಜು ಇಲ್ಲ. ಮನೆ ಮನೆಯಿಂದ ಕಸ ಸಂಗ್ರಹವು ಸ್ಥಗಿತ. ನ್ಯಾಯಕ್ಕಾಗಿ ಪಟ್ಟು ಹಿಡಿದ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ. (attack on commissioner)
ಸಾಗರ ನಗರ ಸಭೆ ಪೌರಾಯುಕ್ತರ ಮೇಲಿನ ಹಲ್ಲೆ ಖಂಡಿಸಿ, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲ್ಲೆಕೋರರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೆ ಕಾರಣಕ್ಕೆ ಸಾಗರ ಪಟ್ಟಣದಲ್ಲಿ ಇವತ್ತು ಕಸ ಸಂಗ್ರಹ ಮಾಡದೆ, ನೀರು ಪೂರೈಕೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ.
(attack on commissioner)
ಪೌರಾಯುಕ್ತರ ಮೇಲೆ ಹಲ್ಲೆಯಾಗಿದ್ದೇಕೆ?
ಹಣ್ಣಿನ ಅಂಗಡಿ ತೆರವು ವಿಚಾರ ಸಾಗರ ನಗರಸಭೆ ಆವರಣದಲ್ಲಿ ಹೈಡ್ರಾಮಾಗೆ ಕಾರಣವಾಗಿದೆ. ಪೌರಾಯುಕ್ತರ ಮೇಲೆಯೆ ಹಲ್ಲೆಯಾಗಿರುವ ಆರೋಪ ಕೇಳಿ ಬಂದಿದೆ. ಇದರಿಂದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದರು.
ಕೆನರಾ ಬ್ಯಾಂಕ್ ಮುಂಭಾಗ ಶಾಬಾಜ್ ಎಂಬುವವರಿಗೆ ಸೇರಿದ ಹಣ್ಣಿನ ಅಂಗಡಿ ತೆರವು ವಿಚಾರ ಪ್ರತಿಭಟನೆ, ನೂಕಾಟ ತಳ್ಳಾಟಕ್ಕೆ ಕಾರಣವಾಗಿದೆ.
(attack on commissioner)
ಹಣ್ಣು ಬೀದಿಗೆ, ಹಣ ನಾಪತ್ತೆ ಆರೋಪ
ಶಾಬಾಜ್ ಎಂಬುವವರು ಕೆನರಾ ಬ್ಯಾಂಕ್ ಮುಂಭಾಗ ಹಣ್ಣಿನ ಅಂಗಡಿ ನಡೆಸುತ್ತಿದ್ದರು. ಚರಂಡಿ ರಿಪೇರಿ ಕಾಮಗಾರಿ ಹಿನ್ನೆಲೆ ಹಣ್ಣಿನ ಗಾಡಿಗಳನ್ನು ತೆರವು ಮಾಡುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೂ ಶಾಬಾಜ್ ಅಂಗಡಿ ತೆರವು ಮಾಡಿರಲಿಲ್ಲ. ರಿಪೇರಿ ಕಾರ್ಯ ಹಿನ್ನೆಲೆ ನಗರಸಭೆ ಅಧಿಕಾರಿಗಳೆ ಅಂಗಡಿ ತೆರವುಗೊಳಿಸಿದ್ದಾರೆ. ಈ ಸಂದರ್ಭ ನಗರಸಭೆ ಅಧಿಕಾರಿಗಳು, ಪೌರ ಕಾರ್ಮಿಕರು ಹಣ್ಣುಗಳನ್ನು ರಸ್ತೆಗೆ ಎಸೆದಿದ್ದಾರೆ. ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಹಣ್ಣು, ನಗದು ಹೊತ್ತೊಯ್ದಿದ್ದಾರೆ ಎಂದು ಶಾಬಾಜ್ ಆರೋಪಿಸಿದ್ದಾರೆ. ಆದರೆ ಇದನ್ನು ಪೌರಾಯುಕ್ತರು ಮತ್ತು ನಗರಸಭೆ ಸಿಬ್ಬಂದಿ ತಿರಸ್ಕರಿಸಿದ್ದಾರೆ.
(attack on commissioner)
ಅಖಾಡಕ್ಕೆ ಧುಮುಕಿದ ಕಾಂಗ್ರೆಸ್
ಹಣ್ಣು ವ್ಯಾಪಾರಿಯ ಮೇಲೆ ನಗರಸಭೆ ಅಧಿಕಾರಿಗಳು, ಪೌರ ಕಾರ್ಮಿಕರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರಸಭೆಯ ಕಾಂಗ್ರೆಸ್ ಸದಸ್ಯರು, ಕೆಲವು ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮನವಿ ಸಲ್ಲಿಸುವ ವೇಳೆ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರನ್ನು ಎಳೆದಾಡಿದ್ದಾರೆ ಎಂದು ಆರೋಪಿಸಲಾಗಿದೆ.
(attack on commissioner)
ಅಧಿಕಾರಿಗಳು, ಸಿಬ್ಬಂದಿಯಿಂದ ದಿಢೀರ್ ಪ್ರತಿಭಟನೆ
ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳು, ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದರು. ನಗರಸಭೆ ಸಿಬ್ಬಂದಿಯ ಪ್ರತಿಭಟನೆಗೆ ಬಿಜೆಪಿ ಬೆಂಬಲವಾಗಿ ನಿಂತಿತು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ನಗರಸಭೆ ಸಿಬ್ಬಂದಿ ಬೆಂಬಲಕ್ಕೆ ನಿಂತರು.
ಪ್ರತಿಭಟನೆ ವೇಳೆ ಕುಸಿದು ಬಿದ್ದು ಸಾವು
ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ ಪರವಾಗಿ ಸಾಗರದ ಈಡಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಇದರಲ್ಲಿ ಭಾಗಿಯಾಗಿದ್ದ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ ಸಹೋದರ ಗಣಪತಿ ಬರವಳ್ಳಿ (50) ಬುಧವಾರ ಸಂಜೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬೆಳವಣಿಗೆ ಬೆನ್ನಿಗೆ ಈಡಿಗ ಸಂಘದವರು ಗಣಪತಿ ಬರವಳ್ಳಿ ಪರವಾಗಿ ಮೌನಾಚರಣೆ ಮಾಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು.
ಮುಂದುವರೆದ ಪೌರ ಕಾರ್ಮಿಕರ ಪ್ರತಿಭಟನೆ
ಪೌರಾಯುಕ್ತರ ಮೇಲಿನ ಹಲ್ಲೆ ಖಂಡಿಸಿ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ ಪ್ರತಿಭಟನೆ ಮುಂದುವರೆಸಿದ್ದಾರೆ. ಕಸ ಸಂಗ್ರಹ ಮಾಡುವ ವಾಹನಗಳನ್ನು ನಗರಸಭೆ ಆವರಣದಲ್ಲಿ ಸಾಲಾಗಿ ನಿಲ್ಲಿಸಿ, ಕೆಲಸ ಸ್ಥಗಿತಗೊಳಿಸಿ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗಿದೆ. ಪೌರಾಯುಕ್ತರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಷ್ಕರ ನಿರತರು ಆಗ್ರಹಿಸಿದ್ದಾರೆ.
ALSO READ – ಶಿವಮೊಗ್ಗದ ಖಾಸಗಿ ಆಸ್ಪತ್ರೆ ವೈದ್ಯ ನೇಣು ಬಿಗಿದು ಆತ್ಮಹತ್ಯೆ
ನೌಕರರ ಸಂಘದಿಂದ ದೂರು
ಇನ್ನು, ಘಟನೆ ಸಂಬಂಧ ಪೌರ ಸೇವಾ ನೌಕರರ ಸಂಘದ ವತಿಯಿಂದ ಸಾಗರ ನಗರ ಠಾಣೆಗೆ ದೂರು ನೀಡಲಾಗಿದೆ. ಪೌರಾಯುಕ್ತರ ಕರ್ತವ್ಯಕ್ಕೆ ಅಡ್ಡಿ, ಕಚೇರಿಗೆ ನುಗ್ಗಿ ದಾಂಧಲೆ, ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.