ಪ್ಯಾರಾಚೂಟ್‌ ತೆರೆಯದೆ ಹೊಸನಗರ ಮೂಲದ ವಾಯುಸೇನೆ ಅಧಿಕಾರಿ ಸಾವು, ಹೇಗಾಯ್ತು ಘಟನೆ?

SHIVAMOGGA LIVE NEWS, 8 FEBRUARY 2025

ನವದೆಹಲಿ : ತರಬೇತಿ ವೇಳೆ ಪ್ಯಾರಾಚೂಟ್‌ ತೆರೆದುಕೊಳ್ಳದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ವಾಯುಪಡೆಯ (Air Force) ವಾರೆಂಟ್‌ ಅಧಿಕಾರಿ ಮಂಜುನಾಥ್‌.ಜಿ.ಎಸ್‌ (36) ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಬೆಳಗ್ಗೆ ಘಟನೆ ಸಂಭವಿಸಿದೆ.

ಹೇಗಾಯಿತು ಘಟನೆ?

ಆಗ್ರಹದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್‌ ಡ್ರಾಪ್‌ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್‌ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್‌ ಬಳಸಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದರು. ಆದರೆ ವಾರಂಟ್‌ ಆಫೀಸರ್‌ ಮಂಜುನಾಥ್‌ ಜಿ.ಎಸ್‌ ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ.

Indian Air Force-OFFICER-MANJUNATH-NO-MORE

ಸಮೀಪದ ಜಮೀನಿನಲ್ಲಿ ಪತ್ತೆ

ಮಂಜುನಾಥ್‌ ಅವರಿಗಾಗಿ ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ಪತ್ತೆಯಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಂಜುನಾಥ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನದಿಂದ ಹಾರಿದ ನಂತರ ಪ್ಯಾರಾಚೂಟ್‌ ತೆರೆದುಕೊಳ್ಳದೆ ಮಂಜುನಾಥ್‌ ಅವರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಹಿಂದೆಯು ಇಂತಹ ಘಟನೆಗಳು ಸಂಭವಿಸಿ ವಾಯುಪಡೆಯ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹೊಸನಗರ ಮೂಲದ ಮಂಜುನಾಥ್‌

ಭಾರತೀಯ ವಾಯು ಸೇನೆಯ ವಾರಂಟ್‌ ಅಫೀಸರ್‌ ಮಂಜುನಾಥ್‌ ಅವರು ಮೂಲತಃ ಹೊಸನಗರ ತಾಲೂಕು ಸಂಕೂರು ಗ್ರಾಮದವರು. ತಂದೆ ಸುರೇಶ್‌, ತಾಯಿ ನಾಗರತ್ನ. ಕೃಷಿಕ ಕುಟುಂಬ. ಇಬ್ಬರು ಸಹೋದರಿಯರು, ಓರ್ವ ಸಹೋದರ ಇದ್ದಾರೆ.

Indian Air Force-OFFICER-MANJUNATH-NO-MORE

ಮಂಜುನಾಥ್‌ ಅವರು ತಮ್ಮೂರಿನ ಸಮೀಪದ ಶಾಲೆಯಲ್ಲಿ ಪ್ರೌಢಶಾಲೆ ಓದಿದ್ದರು. ಸಾಗರದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಬಳಿಕ ಭಾರತೀಯ ವಾಯು ಸೇನೆಗೆ ಸೇರಿದ್ದರು. ವೈ ಗ್ರೇಡ್‌ ಅಧಿಕಾರಿಯಾಗಿದ್ದ ವಾರಂಟ್‌ ಅಫೀಸರ್‌ ಮಂಜುನಾಥ್‌, ಅಸ್ಸಾಂನಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸ್ಸಾಂ ಮೂಲದ ಯುವತಿಯನ್ನು ಮದುವೆಯಗಿದ್ದು, ಒಂದು ಮಗು ಇದೆ.

ಎರಡು ವರ್ಷಕ್ಕೊಮ್ಮೆ ರಜೆ ಮೇಲೆ ಊರಿಗೆ ಬರುತ್ತಿದ್ದರು. ಆಗ ಊರಿನಲ್ಲಿದ್ದವರನ್ನೆಲ್ಲ ಮಾತನಾಡಿಸುತ್ತಿದ್ದರು. ತುಂಬಾ ಸರಳ ಮತ್ತು ಒಳ್ಳೆಯ ಹುಡುಗ.

ಶಾಂತಮೂರ್ತಿ, ಸಂಕೂರು ನಿವಾಸಿ

IAF-OFFICER-MANJUNATH-NO-MORE

Kalleshwara-Enterprises.webp

ಘಟನೆ ಕುರಿತು ಶುಕ್ರವಾರ ಮಧ್ಯಾಹ್ನ ಮಂಜುನಾಥ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಇಂದು ರಾತ್ರಿ ಮಂಜುನಾಥ್‌ ಅವರ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮಿಸಲಿದೆ. ಮಧ್ಯರಾತ್ರಿ ಹೊತ್ತಿಗೆ ಹೊಸನಗರಕ್ಕೆ ಪಾರ್ಥೀವ ಶರೀರ ರವಾನೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ » ಕಾರ್ಗಲ್‌, ಶಿರಾಳಕೊಪ್ಪದಲ್ಲಿ ATMನಿಂದ ಹಣ ಬಿಡಿಸಿ ಮನೆಗೆ ಮರಳಿದ ಇಬ್ಬರಿಗೆ ಆಮೇಲೆ ಕಾದಿತ್ತು ಶಾಕ್‌

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment