ಶಿವಮೊಗ್ಗ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಯೋಧ (Soldier) ರಮೇಶ್ ಅವರಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಪಂಜಾಬ್ನಿಂದ ಕುಟುಂಬ ಸಹಿತ ಆಗಮಿಸಿದ್ದ ಯೋಧ ರಮೇಶ್ ಅವರಿಗೆ ಹಾರ ಹಾಕಿ, ಸಿಹಿ ತಿನ್ನಿಸಲಾಯಿತು. ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.
ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್ ನೇತೃತ್ವದಲ್ಲಿ ಹಸೂಡಿ ಗ್ರಾಮಸ್ಥರು ಹಾರ ಹಾಕಿ, ಘೋಷಣೆಗಳನ್ನು ಕೂಗಿ, ಸಿಹಿ ತಿನ್ನಿಸಿದರು. ಹವಾಲ್ದಾರ್ ರಮೇಶ್, ಪತ್ನಿ ಸಿಂಧೂ ಮತ್ತು ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.

ಹವಾಲ್ದಾರ್ ರಮೇಶ್ ಹೇಳಿದ್ದೇನು?
ಮಾಧ್ಯಮಗಳ ಜೊತೆಗೆ ಮಾತನಾಡಿದ ಹವಾಲ್ದಾರ್ ರಮೇಶ್, ಆರ್ಮಿ ಏರ್ ಡಿಫೆನ್ಸ್ (AAD) ವಿಭಾಗದಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಕಡೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದರು.

ಆಪರೇಷನ್ ಸಿಂಧೂರ ಸಂದರ್ಭ ಪಾಕಿಸ್ತಾನ ವಾಯುಪಡೆಯು ಭಾರತದ ಗಡಿಯೊಳಗೆ ಪ್ರವೇಶಿಸದಂತೆ ತಡೆಯುವುದು ನಮ್ಮ ಜವಾಬ್ದಾರಿಯಾಗಿತ್ತು. ಅಮೃತಸರದಿಂದ ಫಿರೋಜ್ಪುರದವರೆಗಿನ ಗಡಿ ಭಾಗದಲ್ಲಿ ನಾವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೆವು. ಇವತ್ತು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಂತೆ ನಮಗೆ ಸಿಕ್ಕ ಸ್ವಾಗತ ಅವಿಸ್ಮರಣೀಯ ಎಂದು ತಿಳಿಸಿದರು.

‘ಯೋಧನ ಹೆಂಡತಿ ಭಯ ಪಡಲ್ಲʼ
ಹವಾಲ್ದಾರ್ ರಮೇಶ್ ಪತ್ನಿ ಸಿಂಧು ಮಾತನಾಡಿ, ಭಾರತದ ಹಿಂದೂ ಮಹಿಳೆಯರ ಸಿಂಧೂರ ಅಳಿಸಿದ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ನಡೆಸಲಾಯಿತು. ನನ್ನ ಪತಿ ಸೇರಿದಂತೆ ದೊಡ್ಡ ಸಂಖ್ಯೆಯ ಯೋಧರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯೋಧನ ಪತ್ನಿ ಯೋಧನಿಗಿಂತಲು ಗಟ್ಟಿಯಾಗಿದ್ದರೆ ಮಾತ್ರ ಅವರು ಹೋರಾಡಲು ಅನುವಾಗಲಿದೆ. ಆದ್ದರಿಂದ ಪತಿ ಆಪರೇಷನ್ ಸಿಂಧೂರದಲ್ಲಿ ಪಾಲ್ಗೊಂಡಿದ್ದಾಗ ನನಗೆ ಭಯ ಅನಿಸಲಿಲ್ಲ. ಶಿವಮೊಗ್ಗದಲ್ಲಿ ಇಂತಹ ಸ್ವಾಗತ ಲಭಿಸಿದ್ದು ಯೋಧರು ಮತ್ತು ಅವರ ಕುಟುಂಬದವರಿಗೆ ಸ್ಪೂರ್ತಿಯಾಗಿದೆ ಎಂದರು.

ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಮಧುಸೂದನ್, ವಿಜಯ್ ಕುಮಾರ್, ಗಿರೀಶ್, ಹವಾಲ್ದಾರ್ ರಮೇಶ್ ಅವರ ಕುಟುಂಬದವರು, ಹಸೂಡಿಯ ಗ್ರಾಮಸ್ಥರು ಇದ್ದರು.



ಇದನ್ನೂ ಓದಿ » ಆರ್ಸಿಬಿ ಅಬ್ಬರ, ಶಿವಮೊಗ್ಗದಲ್ಲಿ ದೀಪಾವಳಿ ರೀತಿ ಸಂಭ್ರಮ, ಲಘು ಲಾಠಿ ಪ್ರಹಾರ, ಇಲ್ಲಿದೆ ಫಟಾಫಟ್ ಸುದ್ದಿ

