ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ (Industries) ಸಂಘದಿಂದ ಸೆ.15ರಂದು ಬೆಳಗ್ಗೆ 10.30ಕ್ಕೆ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಎಂಜಿನಿರ್ಸ್ ಡೇ, ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ಹಾಗೂ ಟಿ.ವಿ.ನಾರಾಯಣ ಶಾಸ್ತ್ರಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರ ದೂರದೃಷ್ಟಿತ್ವದಿಂದ ಜಿಲ್ಲೆಯಲ್ಲಿ ಹಲವು ಸಣ್ಣ, ಮಧ್ಯಮ ಕೈಗಾರಿಕೆಗಳು ಪ್ರಾರಂಭವಾದವು. ಅದೇ ರೀತಿ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಶ್ರಮದಿಂದ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ಈ ಮೂಲಕ ಶಿವಮೊಗ್ಗ ದಕ್ಷಿಣ ಕರ್ನಾಟಕದ ಪ್ರಮುಖ ಕೈಗಾರಿಕೆ ತಾಣವಾಯಿತು ಎಂದರು.
ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್ ಮಾತನಾಡಿ, ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಆಗಮಿಸಲಿದ್ದು, ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕೈಗಾರಿಕಾ ಪ್ರಶಸ್ತಿ ಪ್ರದಾನ
ಶಾಂತಲಾ ಸ್ಪೆರೊಕಾಸ್ಟ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 2025ನೇ ಸಾಲಿನ ಹೆಮ್ಮೆಯ ಕೈಗಾರಿಕಾ ಪ್ರಶಸ್ತಿಯನ್ನು ಮಾಚೇನಹಳ್ಳಿಯ ಮೆಕ್ವರ್ಸ್, ಕಲ್ಲೂರು ಮಂಡ್ಲಿಯ ಶ್ರೀ ದುರ್ಗಾ ಅಲಾಯ್ಸ್, ಆಟೋ ಕಾಂಪ್ಲೆಕ್ಸ್ನ ಪ್ರಕಾಶ್ ಸೈನ್ ಸಿಸ್ಟಮ್ಸ್ಗೆ ನೀಡಲಾಗುವುದು.
ಅತ್ಯುತ್ತಮ ಕಾರ್ಮಿಕ ಪ್ರಶಸ್ತಿಯನ್ನು ಪಿಯರ್ಲೈಟ್ ಲೈನರ್ಸ್ನ ಬಿ.ಸಂತೋಷ್, ಮಲ್ನಾಡ್ ಅಲಾಯ್ ಕಾಸ್ಟಿಂಗ್ಸ್ನ ಪಿ.ಕೆ.ವಿಜಯ್ ಅವರಿಗೆ ನೀಡಲಾಗುವುದು. ಭಾರತ ಸಣ್ಣ ಕೈಗಾರಿಕೆಗಳ ಮಹಾಸಂಘದ ಉಪಾಧ್ಯಕ್ಷ ಎಂ.ರಾಜು ಅವರನ್ನು ಗೌರವಿಸಲಾಗುವುದು ಎಂದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗ್ಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್.ಮನೋಹರ್, ಉದಯ ಕುಮಾರ್, ಕಿರಣ್ ಕುಮಾರ, ಗಣೇಶ ಅಂಗಡಿ, ವಿಜಯ ಕುಮಾರ್ ಮತ್ತಿತರರಿದ್ದರು.

ಇದನ್ನೂ ಓದಿ » ‘ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ’, ಸಂಸದ ರಾಘವೇಂದ್ರ ಬೇಸರ
Award for Shimoga Industries
