ರಿಪ್ಪನ್ಪೇಟೆ: ಅತಿಶಯ ಕ್ಷೇತ್ರ ಹೊಂಬುಜದ (Hombuja) ಅಧಿನಾಯಕ ಪಾರ್ಶ್ವನಾಥ ತೀರ್ಥಂಕರ ಹಾಗೂ ಯಕ್ಷಿ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಮಾತೆ ಪದ್ಮಾವತಿ ದೇವಿಯ ಬೆಳ್ಳಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಬೆಳ್ಳಿ ರಥೋತ್ಸವಕ್ಕೂ ಮುನ್ನ ಪದ್ಮಾವತಿ ದೇವಿಯ ಉತ್ಸವ ಮೂರ್ತಿಗೆ ಪೀಠಾಧಿಕಾರಿ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಮಹೋತ್ಸವದ ದ್ವಿತೀಯ ದಿನದ ಜಿನಾಗಮೋಕ್ತ ವಿಧಿ-ವಿಧಾನಗಳು ಮಂಗಳವಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿದವು. ಕ್ಷೇತ್ರದ ನೇಮಿನಾಥ ಸ್ವಾಮಿ, ಆದಿನಾಥ ಸ್ವಾಮಿ, ಮಹಾವೀರ ಸ್ವಾಮಿ, ಕೂಷ್ಮಾಂಡಿನಿ ದೇವಿ, ಸರಸ್ವತಿ ದೇವಿ, ಕ್ಷೇತ್ರಪಾಲ, ನಾಗಸನ್ನಿಧಿಯಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿ-ವಿಧಾನಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು.
ಕುಮುದ್ವತಿ ನದಿಯಿಂದ ಜಲವನ್ನು ತಂದು ರಜತ ಕಲಶದಲ್ಲಿ ಐಶ್ವರ್ಯ ಆನೆಯ ಮೇಲಿರಿಸಿ ಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿಯೊಂದಿಗೆ ಕ್ಷೇತ್ರಕ್ಕೆ ತರಲಾಯಿತು. ಪ್ರಧಾನ ಪುರೋಹಿತರಾದ ಪದ್ಮರಾಜ ಇಂದ್ರ ಹಾಗೂ ಸಹ ಪುರೋಹಿತ ವರ್ಗ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಇದನ್ನೂ ಓದಿ – ಚಿನ್ನಾಭರಣ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಹುದ್ದೆಗಳಿಗೆ ನೇರ ಸಂದರ್ಶನ, ಯಾವಾಗ? ಎಷ್ಟಿರಲಿದೆ ಸಂಬಳ?








