ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ (Sharavathi Pumped Storage) ಯೋಜನೆ ವಿರೋಧಿಸಿ ಪರಿಸರಕ್ಕಾಗಿ ನಾವು ಸಂಘಟನೆ, ರಾಷ್ಟ್ರಭಕ್ತರ ಬಳಗ ಮತ್ತು ವಿವಿಧ ಪರಿಸರಾಸಕ್ತ ಸಂಘ ಸಂಸ್ಥೆಗಳ ಒಕ್ಕೂಟ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಕಾರು, ಬೈಕ್ ಮತ್ತು ಸೈಕಲ್ ಜಾಥಾ ನಡೆಸಲಾಯಿತು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮಹಾವೀರ ವೃತ್ತದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು.
ಯಾರೆಲ್ಲ ಏನೆಲ್ಲ ಹೇಳಿದರು?
ಡಾ.ಶಿವರಾಮ್ ಕೃಷ್ಣ, ವೈದ್ಯ: ತಾಂತ್ರಿಕವಾಗಿ ಪರಿಣಾಮಕಾರಿ ಯೋಜನೆಯಲ್ಲ. ಪ್ರಕೃತಿ ನೀಡಿರುವ ಗಾಳಿ, ಬೆಳಕು, ಪರಿಸರ, ಅರಣ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಧರ್ಮ. ಯೋಜನೆಯಿಂದ ಪ್ರಾಣಿ, ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆ ಆಗಲಿದೆ.

ಪ್ರೊ.ಬಿ.ಎಂ.ಕುಮಾರಸ್ವಾಮಿ, ಪರಿಸರಕ್ಕಾಗಿ ನಾವು ಸಂಘಟನೆ: ರಾಜ್ಯ ಸರ್ಕಾರ ಅನಾವಶ್ಯಕವಾಗಿ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆಗೆ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದ ಉಳಿದು, ಬೆಳೆದು ಬಂದಿರುವ ಅರಣ್ಯ ನಾಶವಾಗಲಿದೆ. ಅನೇಕ ವನ್ಯಜೀವಿಗಳಿವೆ. ಅವುಗಳ ಜೀವಕ್ಕೆ ಕುತ್ತು ಉಂಟಾಗಲಿದೆ.
ಡಾ.ಶೇಖರ್ ಗೌಳೇರ್, ಸೈಕಲ್ ಕ್ಲಬ್ ಪ್ರಮುಖ: ಶರಾವತಿಗೆ ಹಲವು ಡ್ಯಾಮ್ ಕಟ್ಟಿದ್ದೇವೆ. ಈಗ ಮತ್ತೆ ಪಂಪ್ಡ್ ಸ್ಟೋರೇಜ್ ಯೋಜನೆ ಮೂಲಕ ಧಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಪರ್ಯಾಯ ಮಾರ್ಗಗಳಿದ್ದರೂ ಅವುಗಳಿಗೆ ಆದ್ಯತೆ ನೀಡುತ್ತಿಲ್ಲ. ಹತ್ತು ವರ್ಷ ಕಾಲ ಯೋಜನೆ ನಡೆಯಲಿದೆ.

ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ: ಬಹು ವರ್ಷಗಳ ನಂತರ ದೊಡ್ಡ ಪ್ರಮಾಣದ ಜಾಥಾ ಆಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲೆಡೆ ಸಂಚರಿಸಿದೆ. ಸರ್ಕಾರ ಗಮನ ನೀಡಲಿಲ್ಲ ಎಂದರೆ ದೊಡ್ಡ ಪ್ರಮಾಣದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದು ಆರಂಭ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಸಚಿವರು ಶಿವಮೊಗ್ಗಕ್ಕೆ ಬಂದರೆ ಘೇರಾವ್, ಮುತ್ತಿಗೆ ಹಾಕಲಾಗುವುದು. ಯೋಜನೆ ಜಾರಿಯಿಂದ ಪರಿಸರ ಅಸಮತೋಲನ ಆಗಲಿದೆ.
ಇದನ್ನೂ ಓದಿ : ಬಿದರೂರು ಜಿನಮಂದಿರದಲ್ಲಿ ಪಂಚಕಲ್ಯಾಣ ಮಹೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
ಪ್ರಮುಖರಾದ ಪ್ರೊ.ಎಲ್.ಕೆ.ಶ್ರೀಪತಿ, ಜನಾರ್ದನ್, ಇ.ವಿಶ್ವಾಸ್, ಶಿವಾನಂದ್ ಕುಗ್ವೆ, ಡಾ.ಪಿ.ನಾರಾಯಣ್, ಮಹಾದೇವಸ್ವಾಮಿ, ಕೆ.ಇ.ಕಾಂತೇಶ್ ಸೇರಿದಂತೆ ಹಲವರು ಇದ್ದರು.

About The Editor
ನಿತಿನ್ ಆರ್.ಕೈದೊಟ್ಲು





