ಶಿವಮೊಗ್ಗ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ನಿಜವಾದ ಉದ್ದೇಶವಿದ್ದಿದ್ದರೆ ಮಹಿಳಾ ಮೀಸಲು (Women’s Reservation) ವಿಧೇಯಕವನ್ನು ಪ್ರತ್ಯೇಕವಾಗಿ ಮಂಡಿಸಬೇಕಿತ್ತು. ಅದರ ಬದಲು ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕದ ಜತೆಗೆ ಮಂಡಿಸಿದ್ದು ಖಂಡನೀಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಇದನ್ನೂ ಓದಿ : ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ, ಪ್ರಮಾಣ ಪತ್ರ ಕುರಿತು ಮಹತ್ವದ ಪ್ರಕಟಣೆ
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಹಿಳಾ ಮೀಸಲು ನೀಡಲು ಮನಸ್ಸಿಲ್ಲ. ಆದ್ದರಿಂದಲೆ ಆ ವಿಧೇಯಕದ ಜತೆಗೆ ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕ ಮಂಡಿಸಿದರು. ಎರಡೂ ವಿಧೇಯಕಗಳನ್ನು ಒಂದೆ ಮತದಿಂದ ಅಳೆಯಲಾಗಿದೆ. ಇದರಿಂದಲೆ ವಿಧೇಯಕಗಳಿಗೆ ಸೋಲಾಯಿತು. ಪ್ರತ್ಯೇಕ ಮತ ಚಲಾವಣೆಗೆ ಅವಕಾಶ ನೀಡಿದ್ದರೆ, ಮಹಿಳಾ ಮೀಸಲು ವಿಧೇಯಕಕ್ಕೆ ಬಹುಮತ ದೊರೆಯುತ್ತಿತ್ತು. ಪ್ರತ್ಯೇಕವಾಗಿ ಏಕೆ ಮಂಡಿಸಲಿಲ್ಲ ಎಂಬುದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕು ಎಂದರು.

ದೇಶದಲ್ಲಿ ಈಗ ಜನಗಣತಿ ನಡೆಯುತ್ತಿದೆ. ಇದು ಮುಗಿದ ನಂತರ ಡಿಲಿಮಿಟೇಶನ್ ವಿಧೇಯಕ ಮಂಡಿಸಬಹುದಿತ್ತು. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಮತ ಗಳಿಸಲು ತರಾತುರಿಯಲ್ಲಿ ವಿಧೇಯಕ ಮಂಡನೆಗೆ ಕೇಂದ್ರ ಸರ್ಕಾರ ಮುಂದಾಯಿತು. ಚುನಾವಣೆ ಮುಗಿದ ನಂತರ ಮೇ 5ರಂದು ವಿಧೇಯಕಗಳ ಮಂಡನೆಗೆ ವಿಶೇಷ ಅಧಿವೇಶನ ಕರೆಯ ಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಶಿವಮೊಗ್ಗದ ನೆಹರು ರಸ್ತೆಯಲ್ಲಿ ಮೆರವಣಿಗೆ, ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ರಮೇಶ್ ಹೆಗ್ಡೆ, ಕಲಗೋಡು ರತ್ನಾಕರ್, ವಿಜಯ್ ಕುಮಾರ್ ಮತ್ತಿತರರಿದ್ದರು.






