ಶಿವಮೊಗ್ಗ: ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ₹10 ಲಕ್ಷ ಸಾಲ ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಂದ ₹5,96,649 ಪಡೆದು ವಂಚಿಸಿರುವ ಘಟನೆ ನಡೆದಿದೆ.
ಶಿವಮೊಗ್ಗದ ರೈತರೊಬ್ಬರ ವಾಟ್ಸ್ ಆಪ್ ಸಂಖ್ಯೆಗೆ ಮೆಸೇಜ್ ಕಳುಹಿಸಿ, ಮುದ್ರಾ ಯೋಜನೆ ಅಡಿಯಲ್ಲಿ ₹10 ಲಕ್ಷ ಸಾಲ ಕೊಡಿಸುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ರೈತ ಮೆಸೇಜ್ ಮಾಡಿದವರನನು ಸಂಪರ್ಕಿಸಿದಾಗ, ತಾವು ಮುದ್ರಾ ಫೈನಾನ್ಸ್ ಉದ್ಯೋಗಿಗಳು ಎಂದು ಪರಿಚಯಿಸಿಕೊಂಡು ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದರು. ಸಾಲ ಮಂಜೂರಾತಿಗೆ ಮೊದಲಿಗೆ ₹7,200 ಪಾವತಿಸಬೇಕೆಂದು ತಿಳಿಸಿದ್ದರು. ಅದರಂತೆ ರೈತ ಏಪ್ರಿಲ್ 30ರಂದು ಅವರು ಕಳುಹಿಸಿದ ಸ್ಕ್ಯಾನರ್ಗೆ ಹಣ ವರ್ಗಾವಣೆ ಮಾಡಿದ್ದರು.

ನಂತರ ವಿವಿಧ ಮೊಬೈಲ್ ಸಂಖ್ಯೆಗಳಿಂದ ರೈತನನ್ನು ಸಂಪರ್ಕಿಸಿದ ವಂಚಕರು, ಸಾಲದ ಹಣ ಮಂಜೂರಾತಿಗೆ ವಿವಿಧ ತೆರಿಗೆಗಳನ್ನು ಕಟ್ಟಬೇಕು ಎಂದು ನಂಬಿಸಿದ್ದರು. ಅದರಂತೆ ಏಪ್ರಿಲ್ 30ರಿಂದ ಜೂನ್ 27ರ ಮಧ್ಯೆ ವಿವಿಧ ಹಂತಗಳಲ್ಲಿ ರೈತನ ಬ್ಯಾಂಕ್ ಖಾತೆಯಿಂದ ಒಟ್ಟು ₹5,96,649 ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಲದ ಹಣ ಮಂಜೂರಾಗದ ಇದ್ದ ಹಿನ್ನೆಲೆ ವಿಚಾರಿಸಿದಾಗ ತಾನು ವಂಚನೆಗೊಳಗಾಗಿರುವುದು ರೈತನಿಗೆ ಅರಿವಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.