ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ನಿಗದಿತ ಸಮಯದಲ್ಲಿ ಹೊಸ ಕಾರು ನೀಡದ ಹಿನ್ನೆಲೆ ಗ್ರಾಹಕನಿಗೆ ಸಂಕಷ್ಟ ಉಂಟಾಗಿದ್ದು, ಈ ಸಂಬಂಧ ಸಲ್ಲಿಸಿದ ಸೇವಾನ್ಯೂನತೆ ದೂರನ್ನು ಪರಿಗಣಿಸಿರುವ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಶೋರೂಮ್ಗೆ ದಂಡ ವಿಧಿಸಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಭದ್ರಾವತಿಯ ನಿವಾಸಿ ಮನೋಜ್ಕುಮಾರ್ ಅವರು ಶಿವಮೊಗ್ಗದ ಕಾರು ಶೋ ರೂಂ ಒಂದಕ್ಕೆ ಹೊಸ ಕಾರು ಖರೀದಿಸಲು ₹21,000 ಮುಂಗಡ ಪಾವತಿಸಿದ್ದರು. ಜೊತೆಗೆ ತಮ್ಮ ಹಳೆಯ ವಾಹನವನ್ನು ₹1.70 ಲಕ್ಷ ಮೌಲ್ಯಕ್ಕೆ ಎಕ್ಸ್ಚೇಂಜ್ ಆಫರ್ನಡಿ ನೀಡಿದ್ದರು. 35 ದಿನಗಳ ಒಳಗೆ ಹೊಸ ಕಾರು ನೀಡುವುದಾಗಿ ಶೋರೂಮ್ ಭರವಸೆ ನೀಡಿತ್ತು. ಆದರೆ, ನಿಗದಿತ ಅವಧಿಯಲ್ಲಿ ಕಾರು ನೀಡಲು ಶೋರೂಮ್ ವಿಫಲವಾಯಿತು. ನಂತರ, ಹಣ ಹಿಂದಿರುಗಿಸುವಂತೆ ಗ್ರಾಹಕ ಮನೋಜ್ ಕುಮಾರ್ ಕೇಳಿದಾಗ ಶೋರೂಮ್ ಹಣ ವಾಪಸ್ ನೀಡಿತ್ತು.

ಗ್ರಾಹಕ ಆಯೋಗದ ಮೆಟ್ಟಿಲೇರಿದ ಮನೋಜ್
ನಿಗದಿತ ಅವಧಿಯಲ್ಲಿ ಕಾರು ನೀಡದ್ದರಿಂದ ತಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ಆಗಿದೆ ಎಂದು ಮನೋಜ್ ಕುಮಾರ್ ಅವರು ಗ್ರಾಹಕ ಆಯೋಗದಲ್ಲಿ ದೂರು ನೀಡಿದ್ದರು. ಸೇವಾನ್ಯೂನತೆಯನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಪೀಠ, ಗ್ರಾಹಕ ಪಾವತಿಸಿದ್ದ ಮುಂಗಡ ಮೊತ್ತ ₹21,000ಕ್ಕೆ ಫೆಬ್ರವರಿ 27ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8ರ ಬಡ್ಡಿ ಸೇರಿಸಿ 45 ದಿನದೊಳಗೆ ಪಾವತಿಸಬೇಕು.
ಅಲ್ಲದೆ, ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆಗೆ ₹25,000 ಹಾಗೂ ವ್ಯಾಜ್ಯದ ವೆಚ್ಚಕ್ಕಾಗಿ ₹10,000 ನೀಡಬೇಕು ಎಂದು ಆದೇಶಿಸಿದೆ. ಒಂದು ವೇಳೆ ಪಾವತಿಸಲು ವಿಳಂಬವಾದರೆ, ಈ ಎಲ್ಲ ಮೊತ್ತಕ್ಕೆ ವಾರ್ಷಿಕ ಶೇ. 10ರ ಬಡ್ಡಿ ಸೇರಿಸಿ ಪಾವತಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.