ಶಿವಮೊಗ್ಗ: ರಾಜ್ಯದಲ್ಲಿ ರದ್ದಾಗಿರುವ ಅಂತ್ಯಸಂಸ್ಕಾರ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಟ್ರಸ್ಟ್ ಸದಸ್ಯರು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವ್ಯಕ್ತಿ ಮೃತಪಟ್ಟರೆ ಅಂತ್ಯಸಂಸ್ಕಾರ ನೆರವೇರಿಸಲು ಈ ಯೋಜನೆಯಡಿ ₹5 ಸಾವಿರ ಸಹಾಯಧನ ನೀಡಲಾಗುತ್ತಿತ್ತು. ಆದರೆ, 2021ರ ಸೆ.1ರಿಂದ ಯೋಜನೆಯನ್ನು ರದ್ದುಪಡಿಸಲಾಗಿದೆ. ಇದರಿಂದ ಬಡವರಿಗೆ ಸಮಸ್ಯೆಯಾಗಿದೆ ಎಂದು ಟ್ರಸ್ಟ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಸದಸ್ಯರು ಮೃತಪಟ್ಟರೆ ₹20 ಸಾವಿರ ಸಹಾಯಧನ ನೀಡುವ ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ ಮುಂದುವರಿದಿದೆ. ಹಾಗಿರುವಾಗ ರಾಜ್ಯ ಸರ್ಕಾರದ ಈ ಯೋಜನೆ ಸ್ಥಗಿತಗೊಂಡಿರುವುದು ಸರಿಯಲ್ಲ. ಮಾನವೀಯ ನೆಲೆಯಲ್ಲಿ ಮುಂದಿನ ಬಜೆಟ್ನಲ್ಲಿ ಈ ಯೋಜನೆಯನ್ನು ಮರುಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರೊ. ಹೆಚ್.ಕಲ್ಲನ, ಹೆಚ್.ಎಂ.ಸಂಗಯ್ಯ, ಸಂಧ್ಯಾ, ಮುಡುಬ ಧರ್ಮಣ್ಣ, ಶಾಂಕ್ರಾ ನಾಯ್ಕ, ಅಲಿಮ್ ಖಾನ್ ಸೇರಿದ ಹಲವರು ಇದ್ದರು.