SHIVAMOGGA LIVE NEWS | 15 APRIL 2024
SHIMOGA : ಕಾಮಗಾರಿಯೊಂದರ ವ್ಯತ್ಯಾಸ ಮೊತ್ತದ ಎಫ್.ಡಿ ಹಣ ಹಿಂತಿರುಗಿಸಲು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಮತ್ತು ಅಕೌಂಟ್ ಅಸಿಸ್ಟೆಂಟ್ ಗಿರೀಶ್ ಜಿ.ಆರ್. ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಏನಿದು ಪ್ರಕರಣ?
ಶಿವಮೊಗ್ಗದ ವಿದ್ಯಾನಗರ ನಿವಾಸಿ ಕ್ಲಾಸ್ 1 ಗುತ್ತಿಗೆದಾರ ಸುನಿಲ್ ಅವರು ವಿಶ್ವವಿದ್ಯಾಲಯದ ವತಿಯಿಂದ ಚಿತ್ರದುರ್ಗದ ಹಿರಿಯೂರಿನ ಕೆವಿಕೆ ಬಬ್ಬೂರ್ ಫಾರ್ಮ್ನ ಆಡಳಿತ ವಿಭಾಗದ ಕಚೇರಿ ಮೇಲ್ಛಾವಣಿ ನಿರ್ಮಿಸಿದ್ದರು. ಕಾಮಗಾರಿ ಪರಿಶೀಲನೆಗೆ ಬಂದಿದ್ದ ಎಇಇ ಲೋಹಿತ್ ಪ್ರಶಾಂತ್ ಕುಮಾರ್ 40 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಕಾಮಗಾರಿ ಬಿಲ್ ಮೊತ್ತ ಪಾವತಿಯಾಗಿತ್ತು. ಎಫ್.ಡಿ ಹಣ 63 ಸಾವಿ ರೂ. ಬಾಕಿ ಇದ್ದು ವಿಚಾರಿಸಿದಾಗ 40 ಸಾವಿರ ರೂ. ಹಣವನ್ನು ತಮ್ಮ ಅಕೌಂಟ್ ಅಸಿಸ್ಟೆಂಟ್ ಬಳಿ ತಲುಪಿಸುವಂತೆ ತಿಳಿಸಿದ್ದರು.
ಇವತ್ತು ಲೋಕಾಯುಕ್ತ ದಾಳಿ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುರಿತು ಗುತ್ತಿಗೆದಾರ ಸುನಿಲ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇವತ್ತು ವಿಶ್ವವಿದ್ಯಾಲಯದಲ್ಲಿ 30 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 30 ಸಾವಿರ ರೂ. ಲಂಚದ ಹಣದೊಂದಿಗೆ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಮತ್ತು ಅಕೌಂಟ್ ಅಸಿಸ್ಟೆಂಟ್ ಗಿರೀಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್.ಪಿ ಮಂಜುನಾಥ್ ಚೌದರಿ, ಡಿವೈಎಸ್ಪಿ ಉಮೇಶ್ ಈಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ ಸಿಬ್ಬಂದಿ ಯೋಗೇಶ್, ಮಹಾಂತೇಶ್ ವಿ.ಎ, ಸುರೇಂದ್ರ ಹೆಚ್.ಜಿ, ಬಿ.ಟಿ.ಚನ್ನೇಶ, ಪ್ರಶಾಂತ್ ಕುಮಾರ್, ರಘುನಾಯ್ಕ, ಅರುಣ್ ಕುಮಾರ್, ಪುಟ್ಟಮ್ಮ, ಪ್ರದೀಪ್, ಗೋಪಿ.ವಿ, ಜಯಂತ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಗಾಂಧಿ ಬಜಾರ್ನಲ್ಲಿ ಕಾಂಗ್ರೆಸ್ ಮೆರವಣಿಗೆ ವೇಳೆ ಬಿದ್ದ ಎಲ್ಇಡಿ ಪರದೆ, ಪತ್ರಕರ್ತ ಸೇರಿ ಮೂವರಿಗೆ ಗಾಯ